ಕೋಲ್ಕತ್ತಾ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಬಗ್ಗೆ ತಮ್ಮ ಸಂಪುಟ ಸದಸ್ಯ ಅಖಿಲ್ ಗಿರಿ ನೀಡಿದ್ದ ಅವಹೇಳನಕಾರಿ ಹೇಳಿಕೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಕ್ಷಮೆಯಾಚಿಸಿದ್ದಾರೆ.
ಈ ಸುದ್ದಿಯನ್ನು ಎನ್ಡಿಟಿವಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
‘ನಾವು ರಾಷ್ಟ್ರಪತಿಯನ್ನು ಗೌರವಿಸುತ್ತೇವೆ. ಅವರು ಒಳ್ಳೆಯ ಮಹಿಳೆ. ಅಖಿಲ್ ಗಿರಿ ಅವರು ಆಡಿದ ಮಾತುಗಳಿಗೆ ನಾನು ಕ್ಷಮೆ ಕೋರುವೆ. ಗಿರಿಯವರು ತಪ್ಪು ಮಾಡಿದ್ದಾರೆ. ಅವರ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಕ್ಷಮೆ ಯಾಚಿಸುತ್ತೇನೆ‘ ಎಂದು ಹೇಳಿದ್ದಾರೆ.
‘ಯಾರೋಬ್ಬರ ಬಗ್ಗೆ ವೈಯಕ್ತಿಕವಾಗಿ ಟೀಕೆ ಮಾಡುವುದು ಪಕ್ಷದ ಸಂಸ್ಕೃತಿಯಲ್ಲ. ಅವಹೇಳನಕಾರಿ ಹೇಳಿಕೆ ನೀಡಿದ ಶಾಸಕರಿಗೆ ಎಚ್ಚರಿಕೆ ನೀಡಲಾಗಿದೆ. ಸೌಂದರ್ಯ ಎಂಬುದು ನೀವು ಹೇಗೆ ಕಾಣಿಸಿಕೊಳ್ಳುತ್ತೀರಿ ಎಂಬುದಲ್ಲ. ನಾವು ಒಳಗಿಂದ ಹೇಗೆ ಇರುತ್ತೇವೆ ಎನ್ನುವುದೇ ನಿಜವಾದ ಸೌಂದರ್ಯ‘ ಎಂದು ಮಮತಾ ಹೇಳಿದ್ದಾರೆ.
ರಾಷ್ಟ್ರಪತಿ ನೋಡಲು ಹೇಗೆ ಕಾಣುತ್ತಾರೆ ಎಂದು ಹೇಳುವ ಗಿರಿಯವರ ಮಾತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ವಿವಾದ ಉಂಟಾಗುತ್ತಿದ್ದಂತೆಯೆ ಅವರು ಕ್ಷಮೆಯನ್ನೂ ಯಾಚಿಸಿದ್ದರು.