ನವದೆಹಲಿ: ಪೆಗಾಸಸ್ಕುತಂತ್ರಾಂಶ ಬಳಸಿ ತಮ್ಮ ಫೋನ್ ಅನ್ನು ಗಮನಿಸಲಾಗುತ್ತಿದೆ ಎಂದು ಶಂಕೆ ಉಳ್ಳವರು ಈ ಕುರಿತು ದೂರು ನೀಡಬಹುದು ಎಂದು ಸುಪ್ರೀಂ ಕೋರ್ಟ್ ನೇಮಕ ಮಾಡಿರುವ ತಾಂತ್ರಿಕ ಸಮಿತಿಯು ತಿಳಿಸಿದೆ.
ಇಸ್ರೇಲ್ನ ವಿವಾದಿತ ಕುತಂತ್ರಾಂಶ ಬಳಸಿದ್ದ ಪೆಗಾಸಸ್ ಗೂಢಚರ್ಯೆ ಪ್ರಕರಣದ ತನಿಖೆಗೆ ಸುಪ್ರೀಂ ಕೋರ್ಟ್ ರಚಿಸಿರುವ ತ್ರಿಸದಸ್ಯರ ತಾಂತ್ರಿಕ ಸಮಿತಿ ಈ ಬಗ್ಗೆ ನೋಟಿಸ್ ನೀಡಿದೆ. ಜ.7ರ ಒಳಗೆ ಸಂಪರ್ಕಿಸಲು ತಿಳಿಸಿದೆ.
ತ್ರಿಸದಸ್ಯ ತಾಂತ್ರಿಕ ಸಮಿತಿಯು ಸುಪ್ರೀಂ ಕೋರ್ಟ್ನ ಮಾಜಿ ನ್ಯಾಯಮೂರ್ತಿ ಆರ್.ವಿ.ರವೀಂದ್ರನ್ ಅವರ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸುತ್ತಿದೆ.
ಜನವರಿ 7ರ ಒಳಗೆ ಇ–ಮೇಲ್ (inquiry@pegasus-india-investigation.in) ಮೂಲಕ ಸಮಿತಿಯನ್ನು ಸಂಪರ್ಕಿಸಬಹುದು. ಮೊಬೈಲ್ ಪರಿಕರ ಸ್ವೀಕೃತಿ ಪತ್ರ ಮತ್ತು ಪರಿಕರದ ಡಿಜಿಟಲ್ ಚಿತ್ರವನ್ನು ಸಮಿತಿಯು ನೀಡಲಿದೆ. ತನಿಖೆ ನಂತರ ಪರಿಕರವನ್ನು ಹಿಂದಿರುಗಿಸಲಾಗುತ್ತದೆ ಎಂದಿದೆ.
ಪೆಗಾಸಸ್ ಗೂಢಚರ್ಯೆ ಪ್ರಕರಣ ಕಳೆದ ವರ್ಷ ವಿವಾದಕ್ಕೆ ಕಾರಣವಾಗಿತ್ತು. ಕುತಂತ್ರಾಂಶ ಬಳಸಿವಿರೋಧ ಪಕ್ಷದ ರಾಜಕಾರಣಿಗಳು, ಪತ್ರಕರ್ತರು, ಸಂವಿಧಾನದ ವಿವಿಧ ಹುದ್ದೆಯಲ್ಲಿರುವ ಪ್ರಮುಖರ ಫೋನ್ ಗಮನಿಸಲಾಗುತ್ತಿದೆ ಎನ್ನಲಾಗಿತ್ತು.
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಪ್ರಮುಖರಾದ ಅಭಿಷೇಕ್ ಬ್ಯಾನರ್ಜಿ, ಅಶೋಕ್ ಲಾವಾಸ, ಅನಿಲ್ ಅಂಬಾನಿ ಮತ್ತು ಕೆಲ ಪತ್ರಕರ್ತರ ಫೋನ್ ಗಮನಿಸಲಾಗುತ್ತಿದೆ ಎಂದೂ ವರದಿಯಾಗಿತ್ತು.
ತಮ್ಮ ಮೊಬೈಲ್ ಅನ್ನು ಈ ತಂತ್ರಾಂಶ ಬಳಸಿ ಗಮನಿಸಲಾಗುತ್ತಿದೆ ಎಂಬ ಶಂಕೆಗೆ ಸಕಾರಣವಿರುವ ನಾಗರಿಕರು ಅರ್ಜಿ ಸಲ್ಲಿಸಬಹುದು. ತಮ್ಮ ಶಂಕೆಗೆ ಕಾರಣಗಳನ್ನು ತಿಳಿಸಬೇಕು ಮತ್ತು ತಾಂತ್ರಿಕ ಸಮಿತಿಯು ಮೊಬೈಲ್ ಫೋನ್ ಪರಿಶೀಲಿಸಲು ಅವಕಾಶ ಕಲ್ಪಿಸುವಂತಿರಬೇಕು ಎಂದು ಸಮಿತಿಯು ತಿಳಿಸಿದೆ.