ನವದೆಹಲಿ: ‘ನಾನು ಎಲ್ಲ ರೀತಿಯ ಔಷಧೀಯ ಪದ್ಧತಿಗಳನ್ನು ಗೌರವಿಸುತ್ತೇನೆ. ಕೋವಿಡ್–19 ಪಿಡುಗಿನ ಸಂದರ್ಭದಲ್ಲಿ ಅಲೋಪಥಿ ಔಷಧ ಪದ್ಧತಿಯು ಸಾಕಷ್ಟು ಜನರ ಜೀವ ಉಳಿಸಿದೆ’ ಎಂದು ಯೋಗ ಗುರು ಬಾಬಾ ರಾಮ್ದೇವ್ ಭಾನುವಾರ ಹೇಳಿದ್ದಾರೆ.
ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್, ‘ಬಾಬಾ ರಾಮ್ದೇವ್ ಅವರು ಈ ರೀತಿ ಹೇಳಿಕೆ ನೀಡಿದ್ದು ದುರದೃಷ್ಟಕರ’ ಎಂದು ಭಾನುವಾರ ಪ್ರತಿಕ್ರಿಯಿಸಿದ್ದರು. ಕೂಡಲೇ ಅವರು ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಳ್ಳಬೇಕು ಎಂದೂ ಆಗ್ರಹಿಸಿದ್ದರು. ಇದರ ಬೆನ್ನಲ್ಲೇ ರಾಮ್ದೇವ್ ಅವರಿಂದ ಈ ಹೇಳಿಕೆ ಹೊರಬಿದ್ದಿದೆ.
ರಾಮ್ದೇವ್ ಅವರು, ‘ಆಧುನಿಕ ವೈದ್ಯಕೀಯ ಪದ್ಧತಿಯನ್ನು ‘ಅವಿವೇಕಿ ವಿಜ್ಞಾನ’ ಎಂದು ಕರೆದಿದ್ದರು’ ಎನ್ನಲಾದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಅವರ ಈ ಹೇಳಿಕೆಯನ್ನು ಭಾರತೀಯ ವೈದ್ಯಕೀಯ ಸಂಸ್ಥೆ (ಐಎಂಎ) ಖಂಡಿಸಿತ್ತು.
ಅಲ್ಲದೇ, ದೆಹಲಿ ವೈದ್ಯಕೀಯ ಸಂಘವು (ಡಿಎಂಎ) ದೆಹಲಿಯ ದರಿಯಾಗಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು.