ಬೆಂಗಳೂರು: ವಿಧಾನಸಭಾ ಅಧಿವೇಶನವನ್ನು ಇದೇ ಶನಿವಾರದವರೆಗೆ ನಡೆಸಲು ಆಡಳಿತ ಮತ್ತು ವಿರೋಧ ಪಕ್ಷಗಳು ಕಲಾಪ ಸಲಹಾ ಸಮಿತಿ (ಬಿಎಸಿ) ಸಭೆಯಲ್ಲಿ ಒಪ್ಪಿಕೊಂಡಿವೆ.
ಕಲಾಪವನ್ನು ಮೂರು ದಿನಗಳಿಗೆ ಮೊಟಕುಗೊಳಿಸಲು ಸರ್ಕಾರ ಉದ್ದೇಶಿಸಿತ್ತು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಈ ಸಂಬಂಧ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರ ಜತೆಗೂ ಮಾತುಕತೆ ನಡೆಸಿದ್ದರು. ಆದರೆ, ಅವರು ಒಪ್ಪಿಕೊಂಡಿರಲಿಲ್ಲ.
ಸೋಮವಾರ ಬೆಳಿಗ್ಗೆ ಕಲಾಪ ಸಲಹಾ ಸಮಿತಿ ಸಭೆ ಸೇರಿದಾಗ ಮುಖ್ಯಮಂತ್ರಿಯವರು ಕೋವಿಡ್ ವ್ಯಾಪಕವಾಗಿ ಹರಡುತ್ತಿರುವುದರಿಂದ ಮತ್ತು ಹಲವು ಶಾಸಕರು ಕೋವಿಡ್ ಪೀಡಿತರಾಗಿರುವುದರಿಂದ ಮೂರು ದಿನಗಳಿಗೆ ಮುಗಿಸೋಣ ಎಂದು ಪ್ರಸ್ತಾವ ಮುಂದಿಟ್ಟರು. ಆದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಇದನ್ನು ಒಪ್ಪಿಕೊಳ್ಳಲಿಲ್ಲ. ಮಸೂದೆಯನ್ನು ಮಂಡಿಸುವುದಾದರೆ ಮೂರು ದಿನಗಳಿಗೆ ಮುಗಿಸುವುದು ಬೇಡ. ವಿಸ್ತೃತವಾಗಿ ಚರ್ಚೆ ನಡೆಸಬೇಕು. ಮಸೂದೆ ಮಂಡಿಸದಿದ್ದರೆ ಮೂರು ದಿನಗಳಿಗೆ ಮುಗಿಸಿ ಎಂದು ಸಿದ್ದರಾಮಯ್ಯ ಹೇಳಿದರು.
ಎಲ್ಲ ಮಸೂದೆಗಳು ಮತ್ತು ಇತರ ವಿಷಯಗಳ ಬಗ್ಗೆ ಚರ್ಚೆ ನಡೆಸಲು ಅವಕಾಶ ನೀಡುವುದಾದರೆ ಮಾತ್ರ ಭಾನುವಾರದವರೆಗೆ ಅಧಿವೇಶನ ನಡೆಸಬಹುದು ಎಂದು ವಿರೋಧ ಪಕ್ಷಗಳು ಪಟ್ಟು ಹಿಡಿದವು. ಅಂತಿಮವಾಗಿ ಶನಿವಾರದವರೆಗೆ ನಡೆಸಲು ತೀರ್ಮಾನಿಸಲಾಯಿತು. ಪ್ರತಿ ದಿನ ಬೆಳಿಗ್ಗೆ 10 ರಿಂದ ರಾತ್ರಿ 7 ರವರೆಗೆ ಅಧಿವೇಶನ ನಡೆಸಲು ಒಪ್ಪಿಗೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಿದ್ದರಾಮಯ್ಯ, ಸಂಸತ್ನಲ್ಲಿ ಕಲಾಪ ಮೊಟಕು ಮಾಡಿದಂತೆ, ಇಲ್ಲೂ ಮೂರು ದಿನಗಳಲ್ಲಿ ಅಧಿವೇಶನ ಮುಗಿಸೋಣ ಎಂದು ಮುಖ್ಯಮಂತ್ರಿ ಹೇಳಿದರು. ಅದಕ್ಕೆ ಒಪ್ಪಿಗೆ ಸೂಚಿಸಲಿಲ್ಲ. ಸುಮಾರು 40 ಮಸೂದೆಗಳು ಮಂಡನೆ ಆಗಲಿವೆ. ಅವುಗಳ ಬಗ್ಗೆ ವಿಸ್ತೃತ ಚರ್ಚೆ ಆಗಬೇಕಿದೆ ಎಂದು ಹೇಳಿದ್ದೇವೆ ಎಂದರು.
ಸಭೆಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಶಾಸಕರಾದ ರಮೇಶ್ ಕುಮಾರ್, ಆರ್.ವಿ. ದೇಶಪಾಂಡೆ, ಸರ್ಕಾರದ ಮುಖ್ಯಸಚೇತಕ ಸುನಿಲ್ ಕುಮಾರ್ ಮುಂತಾದವರು ಭಾಗವಹಿಸಿದ್ದರು.