ಬೆಂಗಳೂರು: ಬಿಟ್ ಕಾಯಿನ್ ಹಗರಣದ ಬಗ್ಗೆ ಪ್ರಧಾನಿ ಅವರಿಗೆ ಕಳಿಸಲಾಗಿರುವ ಪತ್ರದಲ್ಲಿ ಮುಖ್ಯಮಂತ್ರಿ ಕುಟುಂಬದ ಸದಸ್ಯರು, ಹಲವು ಸಚಿವರು, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು, ಸಂಸದರು ಶಾಮೀಲಾಗಿದ್ದಾರೆ ಎಂದು ಆರೋಪಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಸುದ್ದಿಗಾರರ ಜತೆ ಗುರುವಾರ ಮಾತನಾಡಿದ ಅವರು, ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಬಿಟ್ ಕಾಯಿನ್ ಹಗರಣದ ಬಗ್ಗೆ ಕಾಂಗ್ರೆಸ್ನವರ ವಿರುದ್ಧ ಟೀಕೆ ಮಾಡುವ ಬದಲು, ಪ್ರಧಾನಿಗೆ ಕಳಿಸಲಾದ ದೂರಿನ ಬಗ್ಗೆ ಸ್ವಯಂ ಪ್ರೇರಣೆಯಿಂದ ಮೊಕದ್ದಮೆ ದಾಖಲಿಸಲಿ ಎಂದು ಒತ್ತಾಯಿಸಿದರು.
‘ಬಿಟ್ ಕಾಯಿನ್ ಹ್ಯಾಕಿಂಗ್ ಪ್ರಕರಣದ ಆರೋಪಿ ಶ್ರೀಕಿಯನ್ನು ಬಳಸಿಕೊಂಡು ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಅಕ್ರಮ ಎಸಗಲಾಗಿದೆ. ಮೊಹಮ್ಮದ್ ನಲಪಾಡ್ ಪರ ನಕಲಿ ಮತದಾನ ಮಾಡಿಸಲಾಗಿದೆ ಎಂದು ಕಾಂಗ್ರೆಸ್ ನಾಯಕರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ದೂರು ಬಂದರೆ ತನಿಖೆ ನಡೆಸುತ್ತೇವೆ’ ಎಂದು ಸಚಿವ ಜ್ಞಾನೇಂದ್ರ ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್, ಯುವ ಕಾಂಗ್ರೆಸ್ ಚುನಾವಣೆ ನಡೆದಾಗ ಶ್ರೀಕಿ ಜೈಲಿನಲ್ಲಿಯೇ ಇದ್ದ. ಪೊಲೀಸರ ಕಣ್ಗಾವಲಿನಲ್ಲೇ ಇದ್ದ ಆತನಿಗೆ ಲ್ಯಾಪ್ ಟಾಪ್ ಅಥವಾ ಕಂಪ್ಯೂಟರ್ ಒದಗಿಸಿ ಹ್ಯಾಕಿಂಗ್ ಮಾಡಿಸಿದವರು ಯಾರು? ಕಾಂಗ್ರೆಸ್ನವರು ಮಾಡಿಸಲು ಸಾಧ್ಯವೇ ಎಂದೂ ಪ್ರಶ್ನಿಸಿದರು.
ಜ್ಞಾನೇಂದ್ರ ಅವರಿಗೆ ಸಾಮಾನ್ಯ ಜ್ಞಾನವೇ ಇಲ್ಲ. ಏನು ಮಾತನಾಡುತ್ತಿದ್ದೇನೆ ಎಂಬ ಪರಿವೆಯೂ ಇಲ್ಲ. ಅವರನ್ನು ಮೊದಲು ನಿಮ್ಹಾನ್ಸ್ಗೆ ದಾಖಲಿಸಿ ಚಿಕಿತ್ಸೆ ಕೊಡಿಸಬೇಕು ಎಂದು ಡಿಕೆಶಿ ಹೇಳಿದರು.