ಬೆಂಗಳೂರು: ‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು’ ಎಂದು ಆಗ್ರಹಿಸಿ ಸಹಿ ಸಂಗ್ರಹ ಆರಂಭವಾಗಿದ್ದು, ಸುಮಾರು 65 ಶಾಸಕರು ಈ ಮನವಿಗೆ ಸಹಿ ಮಾಡಿದ್ದಾರೆ.
‘ಆದಷ್ಟು ಬೇಗನೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ಮತ್ತು ವರಿಷ್ಠರಿಗೆ ಮನವಿ ಪತ್ರ ನೀಡಲಾಗುವುದು. ಎಲ್ಲ ಶಾಸಕರೂ ಮುಖ್ಯಮಂತ್ರಿಯವರ ನಾಯಕತ್ವದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸುವುದಾಗಿ ಭರವಸೆ ನೀಡಿದ್ದೇವೆ’ ಎಂದು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ‘ಪ್ರಜಾವಾಣಿ’ಗೆ ತಿಳಿಸಿದರು.
‘ಅಧಿವೇಶನದ ಸಂದರ್ಭದಲ್ಲೇ ಸಹಿಸಂಗ್ರಹಿಸುವ ಕಾರ್ಯ ನಡೆಯಿತು. ಇವತ್ತು ಮುಖ್ಯಮಂತ್ರಿಯವರ ಮನೆಯಲ್ಲಿ ಸೇರಿದ್ದ ಶಾಸಕರು ಯತ್ನಾಳ ಅವರ ವರ್ತನೆಯ ಬಗ್ಗೆ ಯಡಿಯೂರಪ್ಪ ಬಳಿ ಅಸಮಾಧಾನ ವನ್ನು ತೋಡಿಕೊಂಡಿದ್ದೇವೆ’ ಎಂದರು.