ಬೆಂಗಳೂರು: ‘ಮುಜರಾಯಿ ಇಲಾಖೆಗೆ ಸೇರಿದ ಸಂಸ್ಥೆಗಳ ಜಮೀನು, ಕಟ್ಟಡ ಅಥವಾ ನಿವೇಶನಗಳೂ ಸೇರಿದಂತೆ ಯಾವುದೇ ಸ್ವತ್ತನ್ನು ಹಿಂದೂಗಳಲ್ಲದವರಿಗೆ ನೀಡಬಾರದು’ ಎಂದುಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ನಿಯಮಗಳು 2002 ರಲ್ಲಿ ಉಲ್ಲೇಖಿಸಲಾಗಿದೆ.
ಆದರೆ, ಮುಜರಾಯಿ ಇಲಾಖೆಗೆ ಸೇರಿದ ಸ್ವತ್ತು, ದೇವಸ್ಥಾನದ ಆವರಣದ ಹೊರಗೆ ಅಂದರೆ ಜಾತ್ರೆ–ಉತ್ಸವ ನಡೆಯುವ ಜಾಗದಲ್ಲಿ ನಿರ್ಬಂಧ ವಿಧಿಸುವ ಬಗ್ಗೆ ಯಾವುದೇ ಪ್ರಸ್ತಾಪ ನಿಯಮದಲ್ಲಿ ಇಲ್ಲ.
ಜಾತ್ರೆಗಳ ಆವರಣದಲ್ಲಿ ಮುಸ್ಲಿಮರಿಗೆ ಅನುಮತಿ ನಿರಾಕರಿಸಿರುವ ಪ್ರಕರಣಗಳ ಬೆನ್ನಲ್ಲೇ ಈ ನಿಯಮದ ಕುರಿತ ಚರ್ಚೆ ಆರಂಭವಾಗಿದೆ. 2002 ರ ನಿಯಮಾವಳಿ ಪ್ರಕಾರ ಮುಜರಾಯಿ ಇಲಾಖೆಯ ದೇವಸ್ಥಾನಗಳ ವ್ಯಾಪ್ತಿಗೆ ಬರುವ ಜಮೀನು, ಕಟ್ಟಡ ಅಥವಾ ನಿವೇಶನಗಳಲ್ಲಿ ವ್ಯಾಪಾರ ನಡೆಸಲು ಗುತ್ತಿಗೆ ನೀಡಲಾಗುತ್ತದೆ.
ಅಲ್ಲದೆ, ಗುತ್ತಿಗೆದಾರನು, ದೇವಸ್ಥಾನದ ಭಕ್ತ ವೃಂದದ ಭಾವನೆಗಳಿಗೆ ನೋವುಂಟು ಮಾಡಬಹುದಾದ ಅಥವಾ ಆವರಣದ ಪಾವಿತ್ರ್ಯತೆಗೆ ಧಕ್ಕೆ ಉಂಟು ಮಾಡಬಹುದಾದ ಯಾವುದೇ ವ್ಯವಹಾರವನ್ನು ನಡೆಸಬಾರದು ಎಂದು ನಿಯಮ ಹೇಳಿದೆ.
ಗುತ್ತಿಗೆ ನೀಡಲಾಗಿರುವ ಸ್ವತ್ತಿನಲ್ಲಿ ಬಾರ್, ಮಾಂಸಾಹಾರದ ಹೋಟೆಲ್, ಮದ್ಯ ಅಥವಾ ಮಾದಕ ಪಾನೀಯಗಳ ಅಂಗಡಿ ಅಥವಾ ಲೈವ್ ಬ್ಯಾಂಡ್ಗಳನ್ನು ನಡೆಸುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ.
ಎಸ್.ಎಂ.ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಈ ನಿಯಮಾವಳಿಯನ್ನು ರೂಪಿಸಲಾಗಿತ್ತು. ಮೇಲೆ ತಿಳಿಸಿದ ಮೂರು ಅಂಶಗಳನ್ನು ಹೊರತುಪಡಿಸಿದರೆ, ಗುತ್ತಿಗೆದಾರನ ಜವಾಬ್ದಾರಿಗಳು, ಬಾಡಿಗೆ, ನಿರ್ವಹಣೆ ಮುಂತಾದ ವಿಷಯಗಳು ಇವೆ.