ಶಿರಸಿ: ಭಾರತೀಯ ಲೆಕ್ಕ ಪರಿಶೋಧಕರ ಸಂಘ (ಐಸಿಎಐ) ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಯಲ್ಲಾಪುರ ತಾಲ್ಲೂಕಿನ ಉಮ್ಮಚಗಿ ಸಂಪೇಸರದ ಮಂಜುನಾಥ ಪರಮೇಶ್ವರ ಹೆಗಡೆ ರಾಷ್ಟ್ರಕ್ಕೆ 4ನೇ ರ್ಯಾಂಕ್ ಗಳಿಸಿದ್ದಾರೆ. ಅವರು ಪರೀಕ್ಷೆಗೆ ವಿಶೇಷ ತರಬೇತಿ ಪಡೆದಿರಲಿಲ್ಲ.
ನಗರದ ಎಂ.ಇ.ಎಸ್.ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಮುಗಿಸಿದ ಬಳಿಕ ಸಿಎ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಬಳಿಕ ಐಪಿಸಿಸಿಯಲ್ಲೂ ಉತ್ತೀರ್ಣಗೊಂಡು ನಗರದ ಚಾರ್ಟೆಡ್ ಅಕೌಂಟೆಂಟ್ ಉದಯ ಸ್ವಾದಿ ಬಳಿ ಆರ್ಟಿಕಲ್ಶಿಪ್ ನಡೆಸುತ್ತಿದ್ದರು.
‘ಹತ್ತನೇ ತರಗತಿಯಲ್ಲಿರುವಾಗ ಪರಿಚಯದವರೊಬ್ಬರು ಸಿಎ ಕುರಿತು ಆಡಿದ ಮಾತು ನೆನಪಿತ್ತು. ಪಿಯುಸಿಯಲ್ಲಿದ್ದಾಗ ನಾನೂ ಚಾರ್ಟಡ್ ಅಕೌಂಟೆಂಟ್ ಆಗುವ ಬಯಕೆ ಮೂಡಿತು. ಅದನ್ನು ಸಾಧಿಸುವ ಗುರಿಯಲ್ಲೇ ವ್ಯಾಸಂಗ ಮಾಡಿದೆ. ವಿಶೇಷ ತರಬೇತಿ ಪಡೆಯದೆ ಪರೀಕ್ಷೆ ಬರೆದಿದ್ದೆ’ ಎಂದು ಮಂಜುನಾಥ ತಿಳಿಸಿದರು.