ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ ಮಾದನಾಯಕನಹಳ್ಳಿ ಮತ್ತು ಮೈಸೂರಿನ ಹೂಟಗಳ್ಳಿಯನ್ನು ಕೇಂದ್ರಸ್ಥಾನವಾಗಿಸಿ ನಗರಸಭೆಗಳಾಗಿ ರೂಪಿಸಲು ಸರ್ಕಾರ ನಿರ್ಧರಿಸಿದೆ. ಲಕ್ಷ್ಮೀಪುರ, ಚಿಕ್ಕಬಿದರಕಲ್ಲು ಮತ್ತು ಶ್ರೀಕಂಠಪುರ ಗ್ರಾಮ ಪಂಚಾಯಿತಿಗಳನ್ನು ಒಟ್ಟುಗೂಡಿಸಿ ಮಾದನಾಯಕನಹಳ್ಳಿ ನಗರಸಭೆ ರೂಪುಗೊಳ್ಳಲಿದೆ. ಅದೇ ರೀತಿ ಮೈಸೂರಿನ ಕೂರ್ಗಳ್ಳಿ, ಹೆಬ್ಬಾಳ ಕೈಗಾರಿಕಾ ಪ್ರದೇಶ, ಬೆಳವಾಡಿ, ಹಿನಕಲ್ ಗ್ರಾಮ ಪಂಚಾಯಿತಿಗಳನ್ನು ಸೇರಿಸಿ ಹೂಟಗಳ್ಳಿ ನಗರಸಭೆ ರೂಪುಗೊಳ್ಳಲಿದೆ.
ಹೊಸ ಪಟ್ಟಣ ಪಂಚಾಯಿತಿಗಳು: ಶಿವಮೊಗ್ಗ ಜಿಲ್ಲೆಯ ಆನವಟ್ಟಿ,ಹೊಳೆ ಹೊನ್ನೂರು, ರಾಮನಗರ ಜಿಲ್ಲೆಯ ಹಾರೊಹಳ್ಳಿ, ದಕ್ಷಿಣಕನ್ನಡ ಜಿಲ್ಲೆ ಮಂಗಳೂರು ತಾಲ್ಲೂಕು ಬಜ್ಪೆ, ಮೈಸೂರು ಜಿಲ್ಲೆಯ ಶ್ರೀರಾಂಪುರ, ಬೋಗಾದಿ, ಕಡಕೊಳ, ರಮ್ಮನಹಳ್ಳಿಗಳು ಪಟ್ಟಣ ಪಂಚಾಯಿತಿಗಳಾಗಲಿವೆ.
ಹಾವೇರಿ ಜಿಲ್ಲೆಯ ಶಿಗ್ಗಾವಿ ಪುರಸಭೆ, ವಿಜಯಪುರ ಜಿಲ್ಲೆಯ ಸಿಂಧಗಿ ಪುರಸಭೆಗಳ ವ್ಯಾಪ್ತಿಗೆ ಸುತ್ತಮುತ್ತಲಿನ ಪ್ರದೇಶಗಳನ್ನು ಸೇರಿಸಲಾಗಿದೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಶಿರಾಳಕೊಪ್ಪ ಪಟ್ಟಣ ಪಂಚಾಯಿತಿ ಪುರಸಭೆಯಾಗಲಿದೆ.