ಬೆಂಗಳೂರು: ಪ್ರಸಕ್ತ ಆರ್ಥಿಕ ವರ್ಷದಲ್ಲಿ ಬಿಡುಗಡೆಯಾಗಿರುವ ಅನುದಾನದಲ್ಲಿ ಶೇ 75ರಷ್ಟು ಮೊತ್ತವನ್ನು ಅಕ್ಟೋಬರ್ ಅಂತ್ಯದೊಳಗೆ ವೆಚ್ಚ ಮಾಡಿರುವುದನ್ನು ಖಾತರಿಪಡಿಸಿಕೊಂಡು ಡಿಸೆಂಬರ್ನಿಂದ ಹೊಸ ಅನುದಾನ ಬಿಡುಗಡೆ ಮಾಡುವಂತೆ ಆರ್ಥಿಕ ಇಲಾಖೆ ವಿವಿಧ ಇಲಾಖೆಗಳಿಗೆ ಆದೇಶಿಸಿದೆ.
2020ರ ಡಿಸೆಂಬರ್ನಿಂದ 2021ರ ಮಾರ್ಚ್ ಅಂತ್ಯದವರೆಗೆ ವಿವಿಧ ಯೋಜನೆಗಳು ಮತ್ತು ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡುವ ಸಂಬಂಧ ಆರ್ಥಿಕ ಇಲಾಖೆ ಕಾರ್ಯದರ್ಶಿ ಏಕರೂಪ್ ಕೌರ್ ನವೆಂಬರ್ 24ರಂದು ಅಧಿಕಾರ ಪ್ರತ್ಯಾಯೋಜನೆಯ ಆದೇಶ ಹೊರಡಿಸಿದ್ದಾರೆ.
‘ರಾಜ್ಯ ಸರ್ಕಾರದ ರಾಜಸ್ವ ಸಂಗ್ರಹಣೆಯು ಅಂದಾಜಿಸಿರುವ ಹಂತವನ್ನು ತಲುಪಲು ಇನ್ನಷ್ಟು ಕಾಲಾವಕಾಶ ಅಗತ್ಯವಿದೆ. ಈ ಕಾರಣದಿಂದ ಅಕ್ಟೋಬರ್ ಅಂತ್ಯದವರೆಗಿನ ವೆಚ್ಚಗಳನ್ನು ಆಧರಿಸಿ ಯೋಜನೆವಾರು ಅನುದಾನ ಹಂಚಿಕೆಯನ್ನು ಪರಿಷ್ಕರಿಸಬೇಕಾದ ಅನಿವಾರ್ಯತೆ ಇದೆ’ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ವಾರ್ಷಿಕ ₹ 10 ಕೋಟಿಯವರೆಗಿನ ವೆಚ್ಚದ ವಿವಿಧ ಕಾಮಗಾರಿಗಳು ಮತ್ತು ಸರಕು ಹಾಗೂ ಸೇವೆಗಳಿಗೆ ಬಾಕಿ ಇರುವ ಅನುದಾನ ಬಿಡುಗಡೆಗೆ ಅನುಮತಿ ನೀಡಲಾಗಿದೆ. ₹ 10 ಕೋಟಿಗಿಂತ ಹೆಚ್ಚಿನ ಮೊತ್ತ ಇದ್ದಲ್ಲಿ ಆರ್ಥಿಕ ಇಲಾಖೆಯಿಂದ ಅನುಮತಿ ಪಡೆಯುವಂತೆ ಸೂಚಿಸಲಾಗಿದೆ.
ಹೊಸದಾಗಿ ಅನುದಾನ ಬಿಡುಗಡೆಗೂ ಮುನ್ನ ಆರಂಭಿಕ ಶಿಲ್ಕು ಮತ್ತು ಪ್ರಸಕ್ತ ವರ್ಷದಲ್ಲಿ ಬಿಡುಗಡೆಯಾದ ಅನುದಾನದಲ್ಲಿ ಶೇ 75ರಷ್ಟು ಬಳಕೆ ಆಗಿರುವುದನ್ನು ಖಾತರಿಪಡಿಸಿಕೊಳ್ಳುವುದು ಕಡ್ಡಾಯ. ಬಾಕಿ ಇರುವ ಮೊತ್ತವನ್ನು ನಾಲ್ಕು ತಿಂಗಳ ಅವಧಿಯಲ್ಲಿ ಎರಡು ಕಂತುಗಳಲ್ಲಿ ಬಿಡುಗಡೆ ಮಾಡಬಹುದು. ವಿವಿಧ ಇಲಾಖೆಗಳು, ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೂ ಇದೇ ಪ್ರಕಾರ ಅನುದಾನ ಬಿಡುಗಡೆ ಮಾಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಈಗಾಗಲೇ ಬಿಡುಗಡೆಯಾಗಿರುವ ಅನುದಾನದಲ್ಲಿ ಶೇ 75ರಷ್ಟನ್ನು ಬಳಕೆ ಮಾಡದಿದ್ದರೂ ಅನಗತ್ಯವಾಗಿ ಹೊಸದಾಗಿ ಅನುದಾನ ಪಡೆದು ಬ್ಯಾಂಕ್ ಅಥವಾ ವೈಯಕ್ತಿಕ ಠೇವಣಿ ಖಾತೆಗಳಲ್ಲಿ ಇಡುವಂತಿಲ್ಲ. ಈ ಬಗ್ಗೆ ಎಲ್ಲ ಇಲಾಖೆಗಳೂ ಎಚ್ಚರಿಕೆ ವಹಿಸಬೇಕು. ಬ್ಯಾಂಕ್ ಅಥವಾ ವೈಯಕ್ತಿಕ ಠೇವಣಿ ಖಾತೆಗಳಲ್ಲಿ ಉಳಿದಿರುವ ಶಿಲ್ಕು ಮತ್ತು ನೈಜ ವೆಚ್ಚಗಳನ್ನು ಪರಿಗಣಿಸಿಯೇ ಹಣ ಬಿಡುಗಡೆ ಮಾಡಬೇಕು ಎಂದು ನಿರ್ದೇಶನ ನೀಡಲಾಗಿದೆ.
ಎಲ್ಲ ಇಲಾಖೆಗಳೂ ಈ ಆದೇಶದ ಅನುಸಾರ ಅನುದಾನ ಬಿಡುಗಡೆ ಮಾಡಬೇಕು ಮತ್ತು ಅದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಆರ್ಥಿಕ ಇಲಾಖೆಗೆ ಸಲ್ಲಿಸಬೇಕು. ಆದೇಶವನ್ನು ಗಮನಿಸದೇ ಇಲಾಖೆಗಳು ಸಲ್ಲಿಸುವ ಬಿಲ್ಲುಗಳನ್ನು ಖಜಾನೆ ಇಲಾಖೆಯು ಅಂಗೀಕರಿಸಬಾರದು ಮತ್ತು ಹಣ ಬಿಡುಗಡೆ ಮಾಡಬಾರದು ಎಂದು ಕಾರ್ಯದರ್ಶಿ ಆದೇಶದಲ್ಲಿ ಸೂಚಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.