ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 Karnataka: ಸಕ್ರಿಯ ಪ್ರಕರಣ 9 ಸಾವಿರಕ್ಕೆ ಇಳಿಕೆ

Last Updated 7 ಜನವರಿ 2021, 21:31 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆ ಕೆಲವು ದಿನಗಳಿಂದ ಸಾವಿರದ ಗಡಿಯ ಆಸುಪಾಸಿನಲ್ಲಿಯೇ ಇದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 9,119ಕ್ಕೆ ಇಳಿಕೆಯಾಗಿದೆ.

ಕಳೆದ ತಿಂಗಳು ಈ ವೇಳೆ 25 ಸಾವಿರ ಸಕ್ರಿಯ ಪ್ರಕರಣಗಳಿದ್ದವು. ರಾಜ್ಯದಲ್ಲಿ ಗುರುವಾರ 761 ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇಲ್ಲಿಯವರೆಗೆ ಸೋಂಕಿಗೀಡಾದವರ ಒಟ್ಟು ಸಂಖ್ಯೆ 9.24 ಲಕ್ಷ ದಾಟಿದೆ. ಸೋಂಕಿತರಲ್ಲಿ ಮತ್ತೆ 7 ಮಂದಿ ಮೃತಪಟ್ಟಿದ್ದಾರೆ. ಈವರೆಗೆ ಸಾವಿಗೀಡಾದವರ ಸಂಖ್ಯೆ 12,131ಕ್ಕೆ ತಲುಪಿದೆ.

ಒಂದೇ ದಿನ 1.19 ಲಕ್ಷ ಆರ್‌ಟಿ–ಪಿಸಿಆರ್‌ ಸೇರಿದಂತೆ 1.29 ಲಕ್ಷ ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ. ಈ ತಿಂಗಳು 7 ದಿನಗಳಲ್ಲಿ 7.22 ಲಕ್ಷ ಮಂದಿ ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದಾರೆ. ಕೋವಿಡ್ ಪೀಡಿತರಲ್ಲಿ ಮತ್ತೆ 812 ಮಂದಿ ಗುಣಮುಖರಾಗಿದ್ದು, ಇದರಿಂದಾಗಿ ಚೇತರಿಸಿಕೊಂಡವರ ಸಂಖ್ಯೆ 9.03 ಲಕ್ಷಕ್ಕೆ ತಲುಪಿದೆ. ಸೋಂಕಿತರಲ್ಲಿ ಸದ್ಯ 205 ಮಂದಿ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಇದ್ದಾರೆ. ಕಳೆದ 14 ದಿನಗಳ ಅವಧಿಯಲ್ಲಿ 58 ಸಾವಿರ ನೇರ ಹಾಗೂ 66 ಸಾವಿರ ಪರೋಕ್ಷ ಸಂಪರ್ಕಿತರನ್ನು ಪತ್ತೆ ಮಾಡಲಾಗಿದೆ.

ರಾಜ್ಯಕ್ಕೆ ಬ್ರಿಟನ್‌ನಿಂದ ಬಂದವರಲ್ಲಿ ಈವರೆಗೆ 40 ಮಂದಿ ಸೋಂಕಿತರಾಗಿದ್ದಾರೆ. ಅವರ ಸಂಪರ್ಕ ಹೊಂದಿದ್ದವರಲ್ಲಿ 25 ಮಂದಿ ಕೋವಿಡ್ ಪೀಡಿತರಾಗಿದ್ದಾರೆ. ರೂಪಾಂತರಗೊಂಡ ಕೊರೊನಾ ವೈರಾಣು 11 ಮಂದಿಯಲ್ಲಿ ಕಾಣಿಸಿಕೊಂಡಿದೆ.

ಬೆಂಗಳೂರಿನಲ್ಲಿ ಮತ್ತೆ 399 ಮಂದಿ ಕೋವಿಡ್ ಪೀಡಿತರಾಗಿದ್ದು, ಸೋಂಕಿತರ ಸಂಖ್ಯೆ 3.91 ಲಕ್ಷ ದಾಟಿದೆ. ಮೈಸೂರಿನಲ್ಲಿ ಮತ್ತೆ 45 ಪ್ರಕರಣಗಳು ವರದಿಯಾಗಿದೆ. ಅಲ್ಲಿ ಸೋಂಕಿತರ ಸಂಖ್ಯೆ 52,685ಕ್ಕೆ ತಲುಪಿದೆ. ದಕ್ಷಿಣ ಕನ್ನಡದಲ್ಲಿ 37, ತುಮಕೂರು ಹಾಗೂ ಹಾಸನದಲ್ಲಿ ತಲಾ 25, ಶಿವಮೊಗ್ಗದಲ್ಲಿ 23, ಚಿಕ್ಕಬಳ್ಳಾಪುರದಲ್ಲಿ 20 ಪ್ರಕರಣಗಳು ವರದಿಯಾಗಿವೆ. ಬೆಂಗಳೂರಿನಲ್ಲಿ 5, ಕೋಲಾರ ಹಾಗೂ ತುಮಕೂರಿನಲ್ಲಿ ತಲಾ ಒಂದು ಮರಣ ಪ್ರಕರಣ ಹೊಸದಾಗಿ ವರದಿಯಾಗಿದೆ.

161 ಶಿಕ್ಷಕರಿಗೆ ಕೊರೊನಾ ಸೋಂಕು ದೃಢ

ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ತರಗತಿ ಆರಂಭಗೊಳ್ಳುವುದಕ್ಕೂ (ಜ. 1) ಮೊದಲೇ ಆರ್‌ಟಿಪಿಸಿಆರ್‌ ತಪಾಸಣೆಗೆ ಒಳಗಾದ ವಿವಿಧ ಶಾಲೆಗಳ ಒಟ್ಟು 161 ಶಿಕ್ಷಕರು ಮತ್ತು ಐವರು ಇತರ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ 19, ಬೆಳಗಾವಿಯಲ್ಲಿ 18, ಚಿಕ್ಕಮಗಳೂರು 13, ಗದಗ ಮತ್ತು ಮೈಸೂರು, ಶಿವಮೊಗ್ಗ, ತುಮಕೂರು ತಲಾ 11, ಚಾಮರಾಜನಗರದಲ್ಲಿ 10, ಚಿತ್ರದುರ್ಗಮ ಹಾವೇರಿಯಲ್ಲಿ ತಲಾ 9, ಕಲಬುರ್ಗಿ 8, ಮಂಡ್ಯ 7, ಬೆಂಗಳೂರು ನಗರ ಉತ್ತರ, ಬೆಂಗಳೂರು ನಗರ ದಕ್ಷಿಣ ಮತ್ತು ದಕ್ಷಿಣ ಕನ್ನಡ ಶೈಕ್ಷಣಿಕ ಜಿಲ್ಲೆಯಲ್ಲಿ ತಲಾ 4, ದಾವಣಗೆರೆ ಮತ್ತು ಉಡುಪಿ ತಲಾ 3, ಬೆಂಗಳೂರು ಗ್ರಾಮಾಂತರ ಮತ್ತು ಯಾದಗಿರಿಯಲ್ಲಿ ತಲಾ ಇಬ್ಬರು, ಕೊಪ್ಪಳ ಮತ್ತು ವಿಜಯ‍ಪುರ ತಲಾ ಒಬ್ಬರು ಶಿಕ್ಷಕರಿಗೆ ಆರ್‌ಟಿಪಿಸಿಆರ್‌ ತಪಾಸಣೆಯಲ್ಲಿ ಪಾಸಿಟಿವ್‌ ವರದಿ ಬಂದಿದೆ.

ಚಿಕ್ಕಮಗಳೂರಿನಲ್ಲಿ ಇಬ್ಬರು ಮತ್ತು ಚಾಮರಾಜನಗರ, ಉಡುಪಿ, ಉತ್ತರಕನ್ನಡ ಜಿಲ್ಲೆಯಲ್ಲಿ ತಲಾ ಒಬ್ಬರು ಬೋಧಕೇತರ ಸಿಬ್ಬಂದಿಗೆ ಸೋಂಕು ತಗಲಿದೆ.

‘ಶಾಲೆ ಆರಂಭವಾಗುವ ಮೊದಲೇ ಈ ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿ ಆರ್‌ಟಿಪಿಸಿಆರ್ ತಪಾಸಣೆಗೆ ಒಳಗಾಗಿದ್ದರು. ಅವರೆಲ್ಲರೂ ಕ್ವಾರಂಟೈನ್‌ನಲ್ಲಿ ಇದ್ದಾರೆ. ಅಲ್ಲದೆ, ಯಾರೂ ಶಾಲೆಗಳಿಗೆ ಬಂದಿಲ್ಲ’ ಎಂದು ಶಿಕ್ಷಣ ಇಲಾಖೆಯ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT