ಮಂಗಳೂರು: ಎಡನೀರು ಮಠದ ನಿಯೋಜಿತ ಉತ್ತರಾಧಿಕಾರಿ ಜಯರಾಮ ಮಂಜತ್ತಾಯ ಅವರಿಗೆ ಕಂಚಿ ಕಾಮಕೋಟಿ ಮಠದಲ್ಲಿ ಸೋಮವಾರ ಅಲ್ಲಿನ ಪೀಠಾಧಿಪತಿ ಶಂಕರ ವಿಜಯೇಂದ್ರ ಸರಸ್ವತಿ ಸ್ವಾಮೀಜಿ ಸನ್ಯಾಸ ದೀಕ್ಷೆ ನೀಡಿ, ‘ಸಚ್ಚಿದಾನಂದ ಭಾರತೀ’ ಎಂದು ನಾಮಕರಣ ಮಾಡಿದರು.
ಈ ಮೂಲಕ ಇಲ್ಲಿಗೆ ಸಮೀಪದ ಕಾಸರಗೋಡಿನ ಎಡನೀರು ಶಂಕರಾಚಾರ್ಯ ತೋಟಕಾಚಾರ್ಯ ಪರಂಪರೆಯ ಮಠಕ್ಕೆ ಅವರು ಉತ್ತರಾಧಿಕಾರಿ ಆದರು.
ನೂತನ ಯತಿಗಳಾದ ಎಡನೀರು ಸಚ್ಚಿದಾನಂದ ಭಾರತೀ ಸ್ವಾಮೀಜಿಇದೇ 27 ರಂದು ಎಡನೀರಿನ ‘ಪುರಪ್ರವೇಶ’ ಮಾಡಲಿದ್ದು, 28ರಂದು ಎಡನೀರು ಮಠದಲ್ಲಿ ಪಟ್ಟಾಭಿಷೇಕ ಹಾಗೂ ಪೀಠಾರೋಹಣ ಕ್ರಮಗಳು ಶಾಸ್ತ್ರೋಕ್ತವಾಗಿ ನೆರವೇರಲಿವೆ.
ನೂತನ ಯತಿಗಳು ದೀಕ್ಷೆಯ ಪೂರ್ವಭಾವಿಯಾಗಿ 150ಕ್ಕೂ ಹೆಚ್ಚು ಪುಣ್ಯಕ್ಷೇತ್ರಗಳು, ಮಠಾಧಿಪತಿಗಳ ಆಶೀರ್ವಾದ ಪಡೆದು ಇದೇ 19ರಂದು ಎಡನೀರು ಮಠಕ್ಕೆ ಬಂದಿದ್ದರು. ಆ ಬಳಿಕ ಮಠದಲ್ಲಿ ಸನ್ಯಾಸ ಕರ್ಮಾಧಿಕಾರ ವಿಧಿ ವಿಧಾನಗಳು ಆರಂಭಗೊಂಡಿದ್ದವು. ಇದೇ 24ರಂದು ಕಂಚಿ ಕಾಮಕೋಟಿ ಮಠಕ್ಕೆ ಪ್ರಯಾಣ ಬೆಳೆಸಿದ್ದರು.
ಭಾನುವಾರ ಮತ್ತು ಸೋಮವಾರ ಕಂಚಿ ಮಠದಲ್ಲಿ ವಿವಿಧ ಶಾಸ್ತ್ರೋಕ್ತ ಕ್ರಮಗಳ ಬಳಿಕ ಕಂಚಿಯ ಶ್ರೀಗಳು ಪ್ರಣವೋಪದೇಶ ನೀಡಿದರು. ಬಳಿಕ ನೂತನ ಯತಿಗಳು ಸನ್ಯಾಸ ದೀಕ್ಷೆ ಸ್ವೀಕರಿಸಿದರು.