ದಕ್ಷಿಣ ಭಾರತದಲ್ಲಿ ಸುಪ್ರೀಂ ಕೋರ್ಟ್ ಪೀಠ ಸ್ಥಾಪಿಸಿ: ರಾಜ್ಯ ವಕೀಲರ ಪರಿಷತ್ತು

ಬೆಂಗಳೂರು: ಸುಪ್ರೀಂ ಕೋರ್ಟ್ ಪೀಠವನ್ನು ದಕ್ಷಿಣ ಭಾರತದಲ್ಲಿ ಸ್ಥಾಪಿಸುವಂತೆ ಕೋರಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ರಾಜ್ಯಪಾಲ ವಜುಭಾಯಿ ವಾಲಾ ಅವರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.
‘ಸಂವಿಧಾನದ ಕಲಂ 32ರ ಪ್ರಕಾರ ನ್ಯಾಯ ಪಡೆಯುವುದು ಪ್ರತಿ ಪ್ರಜೆಯ ಮೂಲಭೂತ ಹಕ್ಕು. ಭಾಷೆ, ಪ್ರಾಂತ್ಯಗಳಿದ್ದುಕೊಂಡೇ ಭೌಗೋಳಿಕವಾಗಿ ವಿಸ್ತಾರವಾದ ವ್ಯಾಪ್ತಿ ಹೊಂದಿರುವ ದೇಶ ಭಾರತ. ಸುಪ್ರೀಂ ಕೋರ್ಟ್ ದೆಹಲಿಯಲ್ಲಿ ಇರುವುದರಿಂದ ಪೂರ್ವ, ಪಶ್ಚಿಮ, ದಕ್ಷಿಣ ಭಾಗದ ಕಕ್ಷಿದಾರರಿಗೆ ಹಾಗೂ ವಕೀಲರಿಗೆ ಆರ್ಥಿಕವಾಗಿ ಸಮಸ್ಯೆ ಆಗುತ್ತಿದೆ.’
‘ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿರುವ ಪ್ರಕರಣಗಳಲ್ಲಿ ಶೇ 40ರಷ್ಟು ದಕ್ಷಿಣ ಭಾರತಕ್ಕೆ ಸಂಬಂಧಿಸಿದವೇ ಆಗಿವೆ. ಶೇ 26ರಷ್ಟು ಪ್ರಕರಣಗಳು ಕರ್ನಾಟಕದವು. ಬೆಂಗಳೂರಿನಲ್ಲಿ ಪೀಠ ಸ್ಥಾಪಿಸಿದರೆ ಕೇರಳ, ತಮಿಳುನಾಡು ಮತ್ತು ಪುದುಚೇರಿಗಳ ಕಕ್ಷಿದಾರರಿಗೂ ಅನುಕೂಲ ಆಗಲಿದೆ’ ಎಂದು ಪರಿಷತ್ತು ಮನವಿಯಲ್ಲಿ ತಿಳಿಸಿದ್ದಾರೆ.
‘ದಕ್ಷಿಣ ಭಾರತದಲ್ಲಿ ಸುಪ್ರೀಂ ಕೋರ್ಟ್ ಪೀಠ ಸ್ಥಾಪಿಸಲು 18ನೇ ಕಾನೂನು ಆಯೋಗವೂ ಶಿಫಾರಸು ಮಾಡಿದೆ. 40 ವರ್ಷಗಳಿಂದ ಈ ಕುರಿತು ಪ್ರಯತ್ನ ನಡೆಯುತ್ತಿದೆ. ಈಗಲಾದರೂ ಪೀಠ ಆರಂಭಿಸಬೇಕು’ ಎಂದು ವಕೀಲರ ಪರಿಷತ್ತಿನ ಅಧ್ಯಕ್ಷ ಎಲ್. ಶ್ರಿನಿವಾಸ ಬಾಬು ನೇತೃತ್ವದ ನಿಯೋಗ ಒತ್ತಾಯಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.