ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಚಕ್ಕಾಗಿ ಎತ್ತು ತಂದ ರೈತ: ಸ್ವಯಂಪ್ರೇರಿತ ಪ್ರಕರಣ ದಾಖಲು

‘ಪ್ರಜಾವಾಣಿ’ ವರದಿ ಆಧರಿಸಿ ಕ್ರಮ
Last Updated 14 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ಬೆಂಗಳೂರು: ಹಾವೇರಿ ಜಿಲ್ಲೆಯ ಸವಣೂರು ಪುರಸಭೆಯಲ್ಲಿ ಮನೆಯ ಖಾತೆ ಬದಲಾವಣೆಗೆ ಲಂಚಕ್ಕೆ ಬೇಡಿಕೆ ಇಟ್ಟ ಅಧಿಕಾರಿಗೆ ನೀಡಲು ರೈತರೊಬ್ಬರು ಹಣದ ಬದಲಿಗೆ ಎತ್ತು ತಂದಿದ್ದ ಪ್ರಕರಣದಲ್ಲಿ ‘ಪ್ರಜಾವಾಣಿ’ ವರದಿ ಆಧರಿಸಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿರುವ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌. ಪಾಟೀಲ, ಕರ್ನಾಟಕ ಲೋಕಾಯುಕ್ತ ಕಾಯ್ದೆಯಡಿ ವಿಚಾರಣೆ ಆರಂಭಿಸಿದ್ದಾರೆ.

ರೈತ ಯಲ್ಲಪ್ಪ ರಾಣೋಜಿ ಎಂಬುವವರ ಮನೆಯ ಖಾತೆ ಬದಲಾವಣೆ ಮಾಡಲು ಪುರಸಭೆ ಅಧಿಕಾರಿಯೊಬ್ಬರು ₹ 25,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಶುಕ್ರವಾರ ತನ್ನ ಎತ್ತನ್ನು ಪುರಸಭೆಗೆ ತಂದಿದ್ದ ರಾಣೋಜಿ, ‘ನನ್ನ ಬಳಿ ಹಣವಿಲ್ಲ. ಎತ್ತು ತೆಗೆದುಕೊಳ್ಳಿ’ ಎಂದು ಮನವಿ ಮಾಡಿದ್ದರು. ‘ಎತ್ತಿನ ಸಮೇತ ಪುರಸಭೆಗೆ ಬಂದ ರೈತ; ಲಂಚ: ಅಧಿಕಾರಿಗೆ ಎತ್ತು ಕೊಡಲು ಮುಂದಾದ ರೈತ’ ಶೀರ್ಷಿಕೆಯಡಿ ‘ಪ್ರಜಾವಾಣಿ’ಯ ಶನಿವಾರದ ಸಂಚಿಕೆಯಲ್ಲಿ ವರದಿ ಪ್ರಕಟವಾಗಿತ್ತು. ಅದನ್ನು ಆಧರಿಸಿ ಮಂಗಳವಾರ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವ ಲೋಕಾಯುಕ್ತರು, ವಿಚಾರಣೆಗೆ ಆದೇಶಿಸಿದ್ದಾರೆ.

‘ಹಿಂದೆ ಒಬ್ಬ ಅಧಿಕಾರಿ ₹ 25,000 ಲಂಚ ಪಡೆದಿದ್ದರು. ಅವರು ವರ್ಗಾವಣೆಗೊಂಡಿದ್ದಾರೆ. ಈಗ ಬಂದಿರುವ ಇನ್ನೊಬ್ಬ ಅಧಿಕಾರಿ ₹ 25,000 ಲಂಚ ಕೇಳುತ್ತಿದ್ದಾರೆ’ ಎಂದು ರೈತ ದೂರಿದ್ದರು. ಈ ಇಬ್ಬರೂ ಅಧಿಕಾರಿಗಳ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಹಾವೇರಿ ಜಿಲ್ಲಾಧಿಕಾರಿಗೆ ಲೋಕಾಯುಕ್ತರು ನಿರ್ದೇಶನ ನೀಡಿದ್ದಾರೆ. ರೈತ ಮಾಡಿರುವ ಆರೋಪಗಳ ಕುರಿತು ವಿವರಣೆ ನೀಡುವಂತೆ ಸವಣೂರು ಪುರಸಭೆಯ ಮುಖ್ಯಾಧಿಕಾರಿಗೆ ಸೂಚಿಸಿದ್ದಾರೆ.

ಪ್ರಕರಣದ ಕುರಿತು ಪ್ರತ್ಯೇಕವಾಗಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಲೋಕಾಯುಕ್ತದ ಹಾವೇರಿ ಜಿಲ್ಲಾ ಘಟಕದ ಡಿವೈಎಸ್‌ಪಿಯವರಿಗೆ ಲೋಕಾಯುಕ್ತರು ಆದೇಶಿಸಿದ್ದಾರೆ. ಇದೇ 21ಕ್ಕೆ ಪ್ರಕರಣದ ವಿಚಾರಣೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT