ಬೆಂಗಳೂರು: ಕೆಂಪುಕೋಟೆಯಲ್ಲಿ ಕೇಸರಿ ಧ್ವಜ ಹಾರಿಸುತ್ತೇವೆ ಎಂದು ಹೇಳಿಕೆ ನೀಡಿರುವ ಸಚಿವ ಕೆ.ಎಸ್. ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿ ವಿಧಾನಸಭೆಯ ಕಾಂಗ್ರೆಸ್ ಸದಸ್ಯರು ಇಂದು ಅಹೋರಾತ್ರಿ ಧರಣಿ ನಡೆಸಲಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಘೋಷಿಸಿದ್ದಾರೆ.
‘ನಾವು ವಿಧಾನಸಭೆಯಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆ. ಈ ವಿಚಾರಕ್ಕೆ ತಾತ್ವಿಕ ಅಂತ್ಯ ನೀಡಲು ನಿರ್ಧರಿಸಿದ್ದೇವೆ. ಹಗಲು ಮತ್ತು ರಾತ್ರಿ ನಾವು ಪ್ರತಿಭಟನೆ ನಡೆಸುತ್ತೇವೆ’ ಎಂದು ಅವರು ಹೇಳಿದ್ದಾರೆ.
'ನಮ್ಮ ದೇಶದ ಹೆಮ್ಮೆ ಮತ್ತು ಸಾರ್ವಭೌಮತ್ವದ ಪ್ರತೀಕವಾದ ರಾಷ್ಟ್ರಧ್ವಜಕ್ಕೆ ಅಗೌರವ ತೋರುವ ಮೂಲಕ ಈಶ್ವರಪ್ಪ ದೇಶದ್ರೋಹ ಎಸಗಿದ್ದಾರೆ‘ ಎಂದು ಅವರು ಕಿಡಿಕಾರಿದ್ದಾರೆ.
ಕಾಂಗ್ರೆಸ್ನ ವಿಧಾನಪರಿಷತ್ ಸದಸ್ಯರು ಸಹ ಅಹೋರಾತ್ರಿ ಪ್ರತಿಭಟನೆ ನಡೆಸಲಿದ್ದಾರೆ.
‘ಆರ್ಎಸ್ಎಸ್ನ ಗುಪ್ತ ಅಜೆಂಡಾವನ್ನು ಈಶ್ವರಪ್ಪ ಮೂಲಕ ಹೊರಹಾಕಲಾಗಿದೆ. ರಾಷ್ಟ್ರಧ್ವಜ ನಮ್ಮ ಸ್ವಾತಂತ್ರ್ಯದ ಸಂಕೇತ. ತ್ರಿವರ್ಣ ಧ್ವಜದ ಮೂಲಕ ಸ್ವಾತಂತ್ರ್ಯ ಹೋರಾಟಗಾರರು ಧೈರ್ಯ ಮತ್ತು ಸ್ಫೂರ್ತಿ ಪಡೆಯುತ್ತಿದ್ದರು. ರಾಷ್ಟ್ರಧ್ವಜಕ್ಕೆ ಅಪಮಾನ ತಡೆಯಲು ಧ್ವಜಸಂಹಿತೆ ಇದೆ’ ಎಂದು ಸಿದ್ದರಾಮಯ್ಯ ಹೇಳಿದರು.