ಬೆಂಗಳೂರು: ರಾಜ್ಯದಲ್ಲಿ ₹10 ಲಕ್ಷದೊಳಗೆ ಮನೆ ಮತ್ತು ವಾಣಿಜ್ಯ ಕಟ್ಟಡ ಕಟ್ಟಿಕೊಳ್ಳುವವರಿಗೆ ಉಚಿತವಾಗಿ ಮರಳು ವಿತರಿಸುವ ಆಶಯದಡಿ ‘ಹೊಸ ನೀತಿ’ ಜಾರಿಗೆ ತರಲು ಉದ್ದೇಶಿಸಲಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ ನಿರಾಣಿ ತಿಳಿಸಿದರು.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್ನ ಸಿ.ಎನ್.ಬಾಲಕೃಷ್ಣ ಪ್ರಶ್ನೆಗೆ ಉತ್ತರಿಸಿದ ಅವರು, ಇದರಿಂದ ಬಡವರಿಗೆ ಅನುಕೂಲವಾಗಲಿದೆ. ಇವರು ಮನೆ ನಿರ್ಮಿಸಿಕೊಳ್ಳಲು ಪ್ರತಿ ಟನ್ಗೆ ₹100 ರಿಂದ ₹200 ದರ ವಿಧಿಸಿ ಮರಳು ಪೂರೈಕೆ ಮಾಡಲಾಗುವುದು ಎಂದು ಹೇಳಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಳ್ಳ, ತೊರೆ ಮತ್ತಿತರ ಕಡೆ ಎತ್ತಿನ ಗಾಡಿ ಮೂಲಕ ಮರಳು ಸಾಗಿಸಲು ಅವಕಾಶ ನೀಡಲಾಗಿದೆ. ಪ್ರಸ್ತುತ ರಾಜ್ಯದ 193 ಮರಳು ನಿಕ್ಷೇಪ ಪ್ರದೇಶಗಳನ್ನು ಗುರುತಿಸಿ 87 ಬ್ಲಾಕ್ಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ ಎಂದರು.
ಮರಳು ಸಮಸ್ಯೆ ಬಗ್ಗೆ ಸಿ.ಎನ್.ಬಾಲಕೃಷ್ಣ, ಜೆಡಿಎಸ್ನ ಕೆ. ಅನ್ನದಾನಿ ಗಮನ ಸೆಳೆದರು.