ಬೆಂಗಳೂರು: ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ್ ಅವರು ರಾಜಕೀಯಕ್ಕೆ ಬರುವ ಮೊದಲು ಸರ್ಟಿಫಿಕೇಟ್ ಕೊಡಿಸುವುದರಲ್ಲಿ ಬಹಳ ಅನುಭವ ಹೊಂದಿದ್ದಾರೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಆಪಾದಿಸಿದರು.
ಸುದ್ದಿಗಾರರ ಜತೆ ಗುರುವಾರ ಮಾತನಾಡಿದ ಅವರು, ಪರೀಕ್ಷೆಯನ್ನೇ ಬರೆಯದ ದಾದಿಯರಿಗೆ(ನರ್ಸ್) ಸರ್ಟಿಫಿಕೇಟ್ ಕೊಡಿಸಿದ್ದರು ಎಂಬ ಆರೋಪ ಅಶ್ವತ್ಥನಾರಾಯಣ ಮೇಲಿತ್ತು. ಕಾಂಗ್ರೆಸ್ ನಾಯಕರು ಈ ವಿಚಾರದ ಪ್ರಸ್ತಾಪವನ್ನೇ ಮಾಡುತ್ತಿಲ್ಲ ಎಂದು ಹಂಗಿಸಿದರು.
ಪೊಲೀಸ್ ಸಬ್ ಇನ್ಸ್ಪೆಕ್ಟರ್(ಪಿಎಸ್ಐ) ನೇಮಕಾತಿಗಾಗಿ ಹಲವರು ಸಾಕಷ್ಟು ಹಣ ನೀಡಿದ್ದಾರೆ. ಅವರು ಈಗ ಜೈಲಿಗೆ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಎಲ್ಲ ವಿಷಯದಲ್ಲೂ ಸರ್ಕಾರ ವಹಿಸಿರುವ ಮೌನ ನೋಡಿದರೆ ಸರ್ಕಾರ ನಡೆಸುತ್ತಿರುವವರು ಇದರಲ್ಲಿ ಪಾಲುದಾರರೇ ಎಂಬ ಸಂಶಯ ಮೂಡುತ್ತದೆ ಎಂದರು.
ಡ್ರಗ್ಸ್ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿಯೊಬ್ಬರ ಮಗನ ಪ್ರಭಾವ ಇದೆ ಎಂದು ಹೇಳಲಾಗಿತ್ತು. ಆ ಪ್ರಕರಣದ ತನಿಖೆ ಒಂದು ಹಂತದವರೆಗೆ ಹೋಗಿ, ಅಲ್ಲಿಯೇ ಮುಚ್ಚಿಹೋಯಿತು. ಪಿಎಸ್ಐ ನೇಮಕಾತಿ ಅಕ್ರಮದಲ್ಲೂ ಅದೇ ಆಗಬಹುದು ಎಂದು ಹೇಳಿದರು.