ಅಂಗವಿಕಲರಿಗೆ ₹5 ಲಕ್ಷದ ಆರೋಗ್ಯ ವಿಮೆ, ವಸತಿ ಯೋಜನೆ ಅಡಿ ಶೇ 3 ಮೀಸಲು: ಬೊಮ್ಮಾಯಿ

ಬೆಂಗಳೂರು: ‘ಅಂಗವಿಕಲರ ಆರೋಗ್ಯ ರಕ್ಷಣೆಗೆ ವಿಶೇಷ ವಿಮಾ ಯೋಜನೆ ಜಾರಿಗೆ ತರಲಾಗುತ್ತಿದ್ದು, ಈ ಯೋಜನೆ ಅಡಿ ₹ 5 ಲಕ್ಷದ ವರೆಗೆ ಚಿಕಿತ್ಸೆ ಪಡೆದುಕೊಳ್ಳಬಹುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶನಾಲಯವು ಶನಿವಾರ ಇಲ್ಲಿ ಆಯೋಜಿಸಿದ್ದ ವಿಶ್ವ ಅಂಗವಿಕಲರ ದಿನಾಚರಣೆಯಲ್ಲಿ ಅವರು ಮಾತನಾಡಿದರು.
‘ಅಂಗವಿಕಲರಿಗೆ ಈಗಲೂ ವಿಮಾ ಯೋಜನೆ ಇದೆ. ಇನ್ನೂ ಹೆಚ್ಚಿನ ಆರೋಗ್ಯ ಸೌಲಭ್ಯಗಳನ್ನು ಸೇರಿಸಿ ಹೊಸ ಯೋಜನೆ ಜಾರಿಗೆ ತರುತ್ತೇವೆ’ ಎಂದರು.
‘ವಿವಿಧ ವಸತಿ ಯೋಜನೆಗಳ ಅಡಿ ಅಂಗವಿಕಲರಿಗೆ ಶೇ 3ರಷ್ಟು ಮೀಸಲು ಕಲ್ಪಿಸಲಾಗುವುದು’ ಎಂದು ಭರವಸೆ ನೀಡಿದರು.
‘ಬುದ್ಧಿಮಾಂದ್ಯ ಮಕ್ಕಳಿಗೆ ಶೆಲ್ಟರ್ ವರ್ಕ್ಶಾಪ್ ನಿರ್ಮಿಸಿ ಸ್ವಉದ್ಯೋಗಕ್ಕೆ ನೆರವು ನೀಡಲಾಗುವುದು. 2 ಸಾವಿರ ಟ್ರೈಸಿಕಲ್ ಖರೀದಿಸಿ ಎಲ್ಲ ಜಿಲ್ಲೆಗಳ ಅಂಗವಿಕಲರಿಗೆ ಮಾರ್ಚ್ ವೇಳೆಗೆ ವಿತರಣೆ ಮಾಡಲಾಗುವುದು. ಈಗ ಟ್ರೈಸಿಕಲ್ಗೆ ನೀಡುತ್ತಿದ್ದ ಅನುದಾನವನ್ನು ₹ 15 ಕೋಟಿಯಿಂದ ₹ 25 ಕೋಟಿಗೆ ಏರಿಕೆ ಮಾಡಲಾಗುವುದು’ ಎಂದು ಮುಖ್ಯಮಂತ್ರಿ ಹೇಳಿದರು.
‘ನಾನು ಮುಖ್ಯಮಂತ್ರಿಯಾದ ಮೇಲೆ ಅಂಗವಿಕಲ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಹಾಗೂ ಪ್ರೋತ್ಸಾಹಧನ ಹೆಚ್ಚಿಸಿದ್ದೇನೆ. ವೃದ್ಧಾಶ್ರಮ ನಿರ್ವಹಣೆಯ ಅನುದಾನವು ₹ 8 ಲಕ್ಷದಿಂದ ₹ 12 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಮುಂದಿನ ಬಜೆಟ್ನಲ್ಲಿ ಅಂಗವಿಕಲ ಮಕ್ಕಳ ವಿದ್ಯಾಭ್ಯಾಸಕ್ಕೆ ವಿಶೇಷ ಅನುದಾನ ಮೀಸಲು ಇಡಲಾಗುವುದು’ ಎಂದು ಹೇಳಿದರು.
ವಿಕಲಚೇತನರ ವಿದ್ಯಾಭ್ಯಾಸಕ್ಕೆ ನೆರವಾಗಲು ಮುಂಬರುವ ಬಜೆಟ್ ನಲ್ಲಿ ವಿಶೇಷ ಅನುದಾನ ಒದಗಿಸಲಾಗುವುದು. ವಿಕಲಚೇತನರಿಗೆ ರೂ 5 ಲಕ್ಷ ವರೆಗೆ ಸರ್ಕಾರಿ ವೆಚ್ಚದಲ್ಲಿ ಅರೋಗ್ಯ ಸೇವೆ ಒದಗಿಸುವ ವಿಮಾ ಯೋಜನೆ ಜಾರಿ ಮಾಡಲಾಗುವುದು ಮತ್ತು ವಸತಿ ಯೋಜನೆಯಲ್ಲಿ ಶೇಕಡಾ 3% ರಷ್ಟು ವಿಕಲಚೇತನರಿಗೆ ಮೀಸಲಿಡಲಾಗುವುದು,
1/2 pic.twitter.com/OZzAhkcjZn— Basavaraj S Bommai (@BSBommai) December 3, 2022
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.