ಮಂಗಳೂರು: ಭಾರಿ ಮಳೆಯಿಂದಾಗಿ ಪಯಸ್ವಿನಿ ನದಿ ಉಕ್ಕಿಹರಿದ ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಪ್ರದೇಶದಲ್ಲಿರುವ ಸಂಪಾಜೆ ಸಮೀಪದ ಪೆರಾಜೆ ಬಿಳಿಯಾರು ಎಂಬಲ್ಲಿ ಹಳ್ಳವೊಂದು ಸೇತುವೆ ಮೇಲೆ ಉಕ್ಕಿ ಹರಿದು ರಸ್ತೆ ಜಲಾವೃತವಾಗಿದೆ.
ಬುಧವಾರ ನಸುಕಿನಲ್ಲಿ 3.30ರಿಂದ ಈ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ವಾಹನಗಳು ರಸ್ತೆಯಲ್ಲೇ ಸಾಲುಗಟ್ಟಿ ನಿಂತಿದ್ದವು.
ಪ್ರವಾಹದ ನೀರಿನಲ್ಲಿ ಸಿಲುಕಿ ಕೆಎಎಸ್ಆರ್ಟಿಸಿಯ ರಾಜಹಂಸ ಬಸ್ ಕೆಟ್ಟು ನಿಂತಿದೆ.
ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಅಗ್ನಿಶಾಮಕ ದಳದ ಸಿಬ್ಬಂದಿ ರಾಜಹಂಸ ಬಸ್ನಲ್ಲಿದ್ದ ಒಂಬತ್ತು ಮಂದಿ ಪ್ರಯಾಣಿಕರನ್ನು ದೋಣಿಗಳ ಮೂಲಕ ಸುರಕ್ಷಿತ ಸ್ಥಳಕ್ಕೆ ತಲುಪಿಸಿದರು. 5.15 ರ ಬಳಿಕ ನೀರಿನ ಮಟ್ಟ ತುಸು ಇಳಿಕೆಯಾಗ ತೊಡಗಿದೆ.
ಮೈಸೂರು- ಮಡಿಕೇರಿ - ಮಂಗಳೂರನ್ನು ಸಂಪರ್ಕಿಸುವ ರಸ್ತೆ ಇದಾಗಿದೆ. ರಾತ್ರಿ ವೇಳೆಯೂ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಪ್ರವಾಹದಿಂದ ಅಂತರ ಜಿಲ್ಲಾ ಸಂಪರ್ಕವೇ ಕಡಿತಗೊಂಡಿದೆ.
‘ಎರಡು ದಿನಗಳಿಂದ ನದಿಯ ನೀರಿನ ಮಟ್ಟ ಹೆಚ್ಚಳವಾಗಿತ್ತು. ಬುಧವಾರ ರಾತ್ರಿ ನದಿ ಉಕ್ಕಿ ಹರಿದಿದೆ. ಪಯಸ್ವಿನಿ ನದಿಯಲ್ಲಿ ಪ್ರವಾಹ ಉಂಟಾಗಿರುವುದರಿಂದ ಇಲ್ಲಿನ ಹಳ್ಳದ ನೀರು ಕಟ್ಟಿಕೊಂಡು ಸೇತುವೆ ಜಲಾವೃತವಾಗಿದೆ’ ಎಂದು ಸ್ಥಳೀಯ ನಿವಾಸಿ ಅನುಷಾ ತಿಳಿಸಿದರು.