ಮಂಗಳೂರು: ‘ಪಂಚರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಹಿಜಾಬ್ ವಿವಾದದ ವಿಚಾರಣೆಯನ್ನು ಫೆ.28ರ ವರೆಗೆ ಮುಂದೂಡಲು ವಿದ್ಯಾರ್ಥಿಗಳ ಪರ ವಕೀಲರು ಈಗ ಕೋರ್ಟ್ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ. ಇದರ ಹಿಂದಿರುವ ಶಕ್ತಿಗಳು ಯಾರು? ಹಿಜಾಬ್ಗೂ ಪಂಚರಾಜ್ಯಗಳ ಚುನಾವಣೆಗೂ ಏನು ಸಂಬಂಧ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ಕುಮಾರ್ ಕಟೀಲ್ ಪ್ರಶ್ನಿಸಿದ್ದಾರೆ.
ಸರಣಿ ಟ್ವೀಟ್ ಮಾಡಿರುವ ಅವರು, ‘ಮಧ್ಯಂತರ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳಲ್ಲಿ ನಾಲ್ವರು ಅಪ್ರಾಪ್ತರು. ಇವರು ಪಂಚರಾಜ್ಯಗಳ ಚುನಾವಣೆಗೆ ಥಳುಕು ಹಾಕುತ್ತಿದ್ದಾರೆ ಎಂದರೆ ಅರ್ಥವೇನು? ಇವರು ಬೇರೆಯವರ ತಾಳಕ್ಕೆ ಕುಣಿಯುವ ಗೊಂಬೆಗಳುಎಂದು ಅರ್ಥವಲ್ಲವೇ’ ಎಂದು ಪ್ರಶ್ನಿಸಿದ್ದಾರೆ.
‘ವಿವಾದ ಸಂಬಂಧ ವಿದ್ಯಾರ್ಥಿನಿಯರ ಪರ ವಾದ ಮಾಡುತ್ತಿರುವ ವಕೀಲರಲ್ಲಿ ಒಬ್ಬರು ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ವಕೀಲರ ಸಮಿತಿ ಅಧ್ಯಕ್ಷರು. ವಿವಾದ ಈಗ ಪಂಚರಾಜ್ಯಗಳ ಚುನಾವಣೆಯ ಫಲಿತಾಂಶದ ಬಗ್ಗೆ ಮಾತನಾಡುತ್ತಿದೆ ಎಂದರೆ ಇದು ಕಾಂಗ್ರೆಸ್ ಪ್ರೇರಿತ ‘ಟೂಲ್ ಕಿಟ್’ ಭಾಗವಲ್ಲವೇ’ ಎಂದು ಕಟೀಲ್ ಅವರು ಪ್ರಶ್ನೆ ಮಾಡಿದ್ದಾರೆ.