ಮೈಸೂರು: ‘ಸಂಪುಟದಲ್ಲಿ ನನಗೂ ಸ್ಥಾನ ನೀಡಲು ಅವಕಾಶವಿದೆ. ಸ್ಥಾನ ಕೊಡುವ ಬಯಕೆಯೂ ಅವರಿಗಿದೆ. ಏನಾಗುತ್ತೆ ನೋಡೋಣ’ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದರು.
‘ಸಂಪುಟ ಪುನಾರಚನೆಯೋ, ವಿಸ್ತರಣೆಯೋ, ಅದು ಯಾವಾಗ ಆಗುತ್ತೋ ಎಂಬುದು ಅಮಿತ್ ಶಾ, ಮೋದಿ ಮತ್ತು ಆ ದೇವರಿಗೆ ಮಾತ್ರ ಗೊತ್ತು. ನಮಗೆ ಯಾರಿಗೂ ಗೊತ್ತಿಲ್ಲ’ ಎಂದು ಶುಕ್ರವಾರ ಇಲ್ಲಿ ಸುದ್ದಿಗಾರರಲ್ಲಿ ತಿಳಿಸಿದರು.
ಪರಿಪೂರ್ಣ ಸಂಪುಟ ರಚನೆಯಾಗಬೇಕು. ಜನರು ಮೆಚ್ಚುವಂತಹ ಮಂತ್ರಿ ಮಂಡಲ ಬೇಕು. ಆ ಮಂತ್ರಿ ಮಂಡಲ ಮತ್ತು ಪಕ್ಷದ ರಾಜ್ಯ ಸಮಿತಿಯು ಜತೆಯಾಗಿ ಕೆಲಸ ಮಾಡಬೇಕು ಎಂದರು.
17 ಮಂದಿ ಪಕ್ಷಾಂತರಿ ಶಾಸಕರು ಬಿಜೆಪಿ ಪಕ್ಷ ಕಟ್ಟಿಲ್ಲ ಎಂಬ ಕೇಂದ್ರ ಸಚಿವ ಸದಾನಂದ ಗೌಡ ಹೇಳಿಕೆಗೆ ಪ್ರತಿಕ್ರಿಯಿಸಿ, ‘ರಾಜಕೀಯದ ಲೆಕ್ಕಾಚಾರ ಬೇರೆಯದೇ ಆಗಿರುತ್ತದೆ. ರಾಜಕೀಯ ಲೆಕ್ಕಾಚಾರದಲ್ಲಿ 51 ದೊಡ್ಡದೇ ಹೊರತು, 49 ದೊಡ್ಡದಲ್ಲ. ಅವರು ತಪ್ಪಿ ಮಾತನಾಡುತ್ತಾ ಇದ್ದಾರೆ ಎಂಬುದು ನನ್ನ ಅನಿಸಿಕೆ’ ಎಂದು ಹೇಳಿದರು.
ನಿಗಮ ಸ್ಥಾಪನೆ ಬೇಕಿರಲಿಲ್ಲ: ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆಯ ಅವಶ್ಯಕತೆಯಿರಲಿಲ್ಲ. ಇದರಿಂದ ಕರ್ನಾಟಕದ ಐಕ್ಯತೆ, ಭದ್ರತೆಗೆ ಧಕ್ಕೆ ಉಂಟಾಗುವ ಅಪಾಯವಿದೆ. ಆದ್ದರಿಂದ ಮುಖ್ಯಮಂತ್ರಿ ತಮ್ಮ ನಿರ್ಧಾರವನ್ನು ಪುನರ್ ಪರಿಶೀಲಿಸಬೇಕು ಎಂದು ಮನವಿ ಮಾಡಿದರು.
‘ಜಾತಿಗೊಂದು ಅಭಿವೃದ್ಧಿ ನಿಗಮ ಸ್ಥಾಪಿಸುವುದು ಸರಿಯಲ್ಲ. ಕರ್ನಾಟಕ ರಾಜ್ಯ ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ನಮ್ಮದು ಚೆಲುವ ಕನ್ನಡ ನಾಡು. ಶಾಂತಿಯ ತೋಟದಲ್ಲಿ ಜಾತಿಗೊಂದು ಪ್ರಾಧಿಕಾರ ಸ್ಥಾಪಿಸುವುದು ಅಶಾಂತಿಗೆ ಕಾರಣವಾಗಬಹುದು’ ಎಂದು ಅಭಿಪ್ರಾಯಪಟ್ಟರು.