ಬೆಂಗಳೂರು: ಜೆಡಿಎಸ್ ‘ಜನತಾ ಮಿತ್ರ’ ಕಾರ್ಯಕ್ರಮದ ಸಮಾರೋಪವನ್ನು ಅ.8ರಂದು ಮಧ್ಯಾಹ್ನ 3ಕ್ಕೆ ಬಸವನಗುಡಿಯ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಮಾರೋಪಕ್ಕೆಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದೆ. ವೇದಿಕೆ ಹಿಂಭಾಗದಲ್ಲಿ ಎಲ್ಇಡಿ ಪರದೆ ಅಳವಡಿಸಲಾಗಿದೆ.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ಟಿ.ಎ.ಶರವಣ, ಭೋಜೇಗೌಡ, ಕೆ.ಎನ್.ತಿಪ್ಪೇಸ್ವಾಮಿ, ಪಕ್ಷದ ನಗರ ಘಟಕದ ಅಧ್ಯಕ್ಷ ಪ್ರಕಾಶ್ ಶುಕ್ರವಾರ ಮೈದಾನಕ್ಕೆ ಭೇಟಿ ನೀಡಿ, ಸಿದ್ಧತೆಗಳನ್ನು ಪರಿಶೀಲಿಸಿದರು.
ಜನತಾಮಿತ್ರದ ಸಮಾರೋಪ ಮಳೆಯಿಂದ ಮೂರು ಬಾರಿ ಮುಂದೂಡಲಾಗಿತ್ತು.
ಬೆಂಗಳೂರಿನ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಸಾಕಷ್ಟು ಮಾಹಿತಿ ನೀಡಿದ್ದಾರೆ. ಬೆಂಗಳೂರು ಅಭಿವೃದ್ಧಿಯ ನೀಲಿ ನಕ್ಷೆ ಸಭೆಯಲ್ಲಿ ಅನಾವರಣವಾಗಲಿದೆ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಭಾಗವಹಿಸುವರು. ಒಂದು ಲಕ್ಷ ಕಾರ್ಯಕರ್ತರು ಸಮಾವೇಶಕ್ಕೆ ಸಾಕ್ಷಿಯಾಗುವರು ಎಂದು ವಿಧಾನ ಪರಿಷತ್ ಸದಸ್ಯ ಶರವಣ ಮಾಹಿತಿ ನೀಡಿದರು.
ಬೆಂಗಳೂರು ಜನರ ಸಮಸ್ಯೆ ಆಲಿಸುವ ಕೆಲಸ ಸರ್ಕಾರ ಮಾಡಿಲ್ಲ. ಕೇವಲ ಪ್ರಚಾರಕ್ಕೆ ಸೀಮಿತವಾಗಿ ಕೆಲಸ ಮಾಡಿದೆ. ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಕೆಲಸ ಜೆಡಿಎಸ್ ಮಾಡುತ್ತಿದೆ.ಜನರ ಸಮಸ್ಯೆಗಳನ್ನು 15 ದಿನಗಳಿಂದ ಆಲಿಸಲಾಗಿದೆ.ಬಿಬಿಎಂಪಿ ಚುನಾವಣೆಗೆ ಸಮಾವೇಶ ದಿಕ್ಸೂಚಿಯಾಗಲಿದೆ ಎಂದು ಶರವಣ ಅವರು ಹೇಳಿದರು.