ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದ ಸರ್ವಾಧಿಕಾರಿ ಧೋರಣೆ ಹೆಚ್ಚುತ್ತಿದೆ: ಸಚಿವ ಜೆ.ಸಿ.ಮಾಧುಸ್ವಾಮಿ ಅಸಮಾಧಾನ

Last Updated 27 ಮಾರ್ಚ್ 2021, 20:09 IST
ಅಕ್ಷರ ಗಾತ್ರ

ಮೈಸೂರು: ‘ರಾಜ್ಯಗಳ ವಿಚಾರಗಳಲ್ಲಿಕೇಂದ್ರ ಸರ್ಕಾರ ಅತಿಕ್ರಮಣ ಮಾಡಿ, ಹಸ್ತಕ್ಷೇಪ ನಡೆಸುತ್ತಿದೆ. ಇದರಿಂದ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗುವ ಆತಂಕ ಎದುರಾಗಿದೆ’ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಇಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಶನಿವಾರ ಆಯೋಜಿಸಿದ್ದ ‘ರಾಷ್ಟ್ರೀಯ ಏಕತೆ ಮತ್ತು ಪ್ರಾದೇಶಿಕ ಸ್ವಾತಂತ್ರ್ಯ’ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ‘ಕೇಂದ್ರದ ಸರ್ವಾಧಿಕಾರಿ ಧೋರಣೆ ಹೆಚ್ಚುತ್ತಿದ್ದು, ಅಧಿಕಾರದ ಕೇಂದ್ರೀಕರಣಕ್ಕೆ ಮುಂದಾಗಿದೆ. ಈ ಧೋರಣೆಯಿಂದಲೇ ಪ್ರಾದೇಶಿಕ ಭಾವನೆ ಬೆಳೆಯುತ್ತಿದೆ. ಎಲ್ಲೋ ಕುಳಿತು ನಮ್ಮನ್ನು ಆಳುವವರ ಸರ್ವಾಧಿಕಾರಿ ಧೋರಣೆಯನ್ನು ನಿಗ್ರಹ ಮಾಡದಿದ್ದರೆ ಮುಂದೆ ಕಷ್ಟವಾಗಲಿದೆ’ ಎಂದರು.

‘16 ರಾಜ್ಯಗಳು ಇದ್ದದ್ದು, ಈಗ 29 ರಾಜ್ಯಗಳಾಗಿವೆ. ಕೊಡಗಿನವರು, ಉತ್ತರ ಕರ್ನಾಟಕದವರು, ದಕ್ಷಿಣ ಕನ್ನಡದವರು, ಮದ್ರಾಸ್‌ ಪ್ರಾಂತ್ಯದವರು ಪ‍್ರತ್ಯೇಕ ರಾಜ್ಯಕ್ಕೆ ಬೇಡಿಕೆ ಇಡುತ್ತಿದ್ದಾರೆ. ಕೊಡಗಿನಲ್ಲಿ ಕಂದಾಯ ದಾಖಲೆಗಳನ್ನು ಸರಿಪಡಿಸಲು ಈವರೆಗೆ ಸಾಧ್ಯವಾಗಿಲ್ಲ. ಸರಿಯಾದ ಸೌಲಭ್ಯ ಒದಗಿಸಿದ್ದರೆ ಅವರೇಕೆ ದನಿ ಎತ್ತುತ್ತಿದ್ದರು’ ಎಂದು ಪ್ರಶ್ನಿಸಿದರು.

‘ನೀಟ್‌ ಪರೀಕ್ಷೆಗೂ ನಮ್ಮ ರಾಜ್ಯಕ್ಕೂ ಏನು ಸಂಬಂಧ? ಇದನ್ನು ಸಂಸದ ತೇಜಸ್ವಿ ಸೂರ್ಯ ಸಂಸತ್ತಿನಲ್ಲಿ ಪ್ರಶ್ನಿಸಬೇಕು. ಉತ್ತರ ಭಾರತದವರಿಗೆ ರಾಜ್ಯದಲ್ಲಿ ಪ್ರವೇಶಾತಿ ಸಿಗುತ್ತದೆ. ನಾವು ಬಂಡವಾಳ ಹಾಕಿ, ಅಂಥವರಿಗೆ ರೆಡ್‌ ಕಾರ್ಪೆಟ್‌ ಹಾಕಿ ಸ್ವಾಗತಿಸುತ್ತಿದ್ದೇವೆ. 3–4 ವರ್ಷಗಳಲ್ಲಿ ರಾಜ್ಯದಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಉಂಟಾಗಲಿದೆ’ ಎಂದು ಎಚ್ಚರಿಸಿದರು.

‘ಈ ವಿಚಾರದಲ್ಲಿ ತಮಿಳುನಾಡು ರಾಜ್ಯದವರು ಹೋರಾಡಿ ಯಶಸ್ಸು ಕಂಡರು. ಆದರೆ, ಕನ್ನಡಿಗರಿಗೆ ಹೋರಾಟದ ಶಕ್ತಿ ಇಲ್ಲವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದ ಮಾಧುಸ್ವಾಮಿ, ‘ಎದ್ದೆದ್ದು ಬೀಳುತಿಹೆ, ಗುದ್ದಾಡಿ ಸೋಲುತಿಹೆ, ಉದ್ಧರಿಸುವೆನು ಜಗವನೆನ್ನುತಿಹ ಸಖನೆ, ನಿನ್ನ ಉದ್ಧಾರವೆಷ್ಟಾಯ್ತೊ?‘ ಎಂಬ ಡಿವಿಜಿಯವರ ಮಂಕುತಿಮ್ಮನ ಕಗ್ಗ ವಾಚಿಸಿದರು.

‘ಬಹುರಾಷ್ಟ್ರೀಯ ಕಂಪನಿಗಳಿಂದ ರಾಜ್ಯಕ್ಕೇನು ಲಾಭ? ನಮ್ಮ ಸೌಲಭ್ಯಗಳನ್ನು ಪಡೆದು ನಮಗೇ ಉದ್ಯೋಗ ನೀಡುತ್ತಿಲ್ಲ. ಹಿಂದೆ ಒಮ್ಮೆ, ಪರಿಶೀಲನೆಗೆಂದು ಒರ‍್ಯಾಕಲ್‌ ಕಂಪನಿಗೆ ಹೋಗಿದ್ದೆ. ನನಗೆ ಕಾಫಿ ತಂದುಕೊಟ್ಟ ಹುಡುಗನಿಂದ ಹಿಡಿದು ಕಸ ಗುಡಿಸುವವನವರೆಗೆ ಒಬ್ಬ ಕನ್ನಡಿಗ ಉದ್ಯೋಗಿಯೂ ಅಲ್ಲಿರಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ತುಮಕೂರಿನಲ್ಲಿ 14 ಸಾವಿರ ಎಕರೆ ಜಮೀನನ್ನು ಕಿತ್ತುಕೊಂಡು ಕಾರಿಡಾರ್‌ ಮಾಡಲಾಗಿದೆ. ನಮ್ಮ ಅಂಕಿ ಅಂಶಗಳ ಪ್ರಕಾರ 88 ಸಾವಿರ ಉದ್ಯೋಗ ಸೃಷ್ಟಿಸಲಾಗುತ್ತಿದೆ. ಅದರಲ್ಲಿ ಸ್ಥಳೀಯವಾಗಿ 800 ಉದ್ಯೋಗವನ್ನೂ ಕೊಟ್ಟಿಲ್ಲ‌. ಪ್ರಧಾನಿ ಮೋದಿ ಉದ್ಘಾಟಿಸಿದ ಫುಡ್‌ ಪಾರ್ಕ್‌ನಲ್ಲಿ 10 ಮಂದಿ ಸ್ಥಳೀಯರಿಗೇ ಉದ್ಯೋಗ ನೀಡಿಲ್ಲ’ ಎಂದು ಅಸಮಾಧಾನ ಹೊರಹಾಕಿದರು.

ವಿಭೂತಿ ಗಟ್ಟಿ ಮುಟ್ಟಿಸುವುದಿಲ್ಲ

‘ಲಿಂಗಾಯತ ಸಮುದಾಯದಲ್ಲೂ ಒಳಜಾತಿಗಳಿವೆ. ಆದರೆ, ಒಬ್ಬರು ಇನ್ನೊಬ್ಬರ ಕೈಯಲ್ಲಿ ವಿಭೂತಿ ಗಟ್ಟಿ ಮುಟ್ಟಿಸುವುದಿಲ್ಲ. ಬಯಲಲ್ಲಿ ನಿಂತು ನಾವೆಲ್ಲಾ ಒಂದೇ ಎನ್ನುತ್ತೇವೆ. ನಾನೂ ಲಿಂಗಾಯತ. ಹಾಗೆಂದು ನನ್ನಿಂದ ವಿಭೂತಿ ಮುಟ್ಟಿಸುತ್ತಾರೆಯೇ? ಈ ಭಾವನೆ ಹೋಗಬೇಕು’ ಎಂದು ಮಾಧುಸ್ವಾಮಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT