ಬೆಂಗಳೂರು: ಪ್ರತಿ ಲೀಟರ್ ಹಾಲಿನ ದರವನ್ನು ₹ 3 ಹೆಚ್ಚಿಸಲು ಕೆಎಂಎಫ್ ತೀರ್ಮಾನಿಸಿದ್ದು, ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಹಾಲಿನ ದರ ಹೆಚ್ಚಿಸಲು ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದೆ.14 ಜಿಲ್ಲಾ ಹಾಲು ಒಕ್ಕೂಟಗಳು ಹಾಲಿನ ದರ ಹೆಚ್ಚಿಸಲು ಒಲವು ತೋರಿದ್ದವು.
ಆದರೆ, ದರ ಹೆಚ್ಚಿಸಲು ಸರ್ಕಾರ ಅನುಮತಿ ನೀಡಿದ ಬಳಿಕವೇ ಈ ನಿರ್ಧಾರ ಜಾರಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ದರ ಹೆಚ್ಚಿಸುವಂತೆ ಎಂಟು ತಿಂಗಳಿಂದ ಜಿಲ್ಲಾ ಹಾಲು ಒಕ್ಕೂಟಗಳು ಕೆಎಂಎಫ್ ಮೇಲೆ ಒತ್ತಡ ಹೇರಿದ್ದವು. ಅಧ್ಯಕ್ಷರು ಮನವಿ ಮಾಡಿದ್ದರೂ ಹಾಲಿನ ದರ ಹೆಚ್ಚಳಕ್ಕೆ ಸರ್ಕಾರ ಮುಂದಾಗಿರಲಿಲ್ಲ.ರೈತರ ಅನುಕೂಲಕ್ಕೋಸ್ಕರ ಈಗ ದರ ಹೆಚ್ಚಿಸಲು ನಿರ್ಧರಿಸಲಾಗಿದೆ’ ಎಂದು ಆಡಳಿತ ಮಂಡಳಿ ಮೂಲಗಳು ಹೇಳಿವೆ.
‘ಖಾಸಗಿ ಬ್ರಾಂಡ್ಗಳ ಹಾಲಿನ ದರದಲ್ಲಿ ಭಾರಿ ಬದಲಾವಣೆಯಾಗಿದೆ. ಕೆಎಂಎಫ್ ಮಾತ್ರ ಪ್ರತಿ ಲೀಟರ್ ಹಾಲಿಗೆ ₹ 37 ನೀಡುತ್ತಿದೆ. ₹ 8 ರಿಂದ ₹ 10 ವ್ಯತ್ಯಾಸ ಕಂಡುಬರುತ್ತಿದೆ. ಹೆಚ್ಚಿಸುವ ದರವನ್ನು ರೈತರಿಗೆ ನೀಡಲು ನಿರ್ಧಾರ ಮಾಡಲಾಗಿದೆ’ ಎಂದು ಮೂಲಗಳು ತಿಳಿಸಿವೆ.