ಪೀಠಾಧಿಪತಿ ನೇಮಕಕ್ಕೆ ಸಂಬಂಧಿಸಿದಂತೆ ಮಠದ ಆಡಳಿತ ಮಂಡಳಿಯ ಅಧ್ಯಕ್ಷ ರವಿ ದೇಶಪಾಂಡೆ ಪ್ರಸ್ತಾವನೆ ಮಂಡಿಸಿದರು. ಈ ಸಂದರ್ಭದಲ್ಲಿ ಹಿಂದಿನ ಶ್ರೀಗಳು ಒಂದು ವರ್ಷದ ಹಿಂದೆಯೇ ಮುಂದಿನ ಪೀಠಾಧಿಪತಿ ನೇಮಕಕ್ಕೆ ಕುರಿತು ಸಿದ್ಧಪಡಿಸಿದ್ದ ಅಧಿಕೃತ ಪತ್ರ ಹಾಗೂ ನಿಯೋಜಿತ ಪೀಠಾಧಿಪತಿ ಅವರ ತಂದೆ–ತಾಯಿಗೆ ಖುದ್ದಾಗಿ ಬರೆದ ಪತ್ರವನ್ನು ಸಭೆಯ ಮುಂದಿಟ್ಟರು. ಜನಾರ್ದನ ಶಾಸ್ತ್ರಿ ಜೋಶಿ ಅವರನ್ನು ಸರ್ವಾನುಮತದಿಂದ ನೂತನ ಪೀಠಾಧಿಪತಿಯನ್ನಾಗಿ ನೇಮಕ ಮಾಡಲಾಯಿತು. ಜೋಶಿ ಅವರು ವೇದ, ಉಪನಿಷತ್ತು ಹಾಗೂ ಸಂಸ್ಕೃತ ಭಾಷಾ ಬೆಳವಣಿಗೆಗೆ ಅಪಾರ ಸೇವೆ ಸಲ್ಲಿಸಿರುವ ಪಂಡಿತ ಪ್ರಕಾಂಡ ಬಾಲಚಂದ್ರ ಶಾಸ್ತ್ರಿ ಅವರ ಪುತ್ರ ಎಂದು ಪ್ರಕಟಣೆ ತಿಳಿಸಿದೆ.