ಬೆಂಗಳೂರು: ‘ನಗರಕ್ಕೆ ಟ್ರ್ಯಾಕ್ಟರ್ ತರಲು ಅವಕಾಶ ನೀಡದಿದ್ದರೆ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡಲಾಗುವುದು’ ಎಂದು ರಾಜ್ಯ ಕಬ್ಬು ಬೆಳಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.
‘ಗಣರಾಜ್ಯೋತ್ಸವ ಆಚರಣೆಗೆ ನಮ್ಮೀಂದ ಯಾವುದೇ ಧಕ್ಕೆ ಆಗುವುದಿಲ್ಲ. ಶಾಂತ ರೀತಿಯಲ್ಲಿ ಟ್ರ್ಯಾಕ್ಟರ್, ಬೈಕ್, ಖಾಸಗಿ ವಾಹನಗಳಲ್ಲಿ ರ್ಯಾಲಿ ನಡೆಸಲಿದ್ದೇವೆ’ ಎಂದು ಸುದ್ದಿಗೋಷ್ಠಿಯಲ್ಲಿ ಸೋಮವಾರ ಹೇಳಿದರು.
‘ದೆಹಲಿಯಲ್ಲಿ ನಡೆಯುತ್ತಿರುವ ಟ್ರ್ಯಾಕ್ಟರ್ ಪರೇಡ್ ಬೆಂಬಲಿಸಿ ಬೆಂಗಳೂರಿನಲ್ಲೂ ಟ್ರ್ಯಾಕ್ಟರ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಅದಕ್ಕೆ ಪೊಲೀಸರ ಅನುಮತಿ ಬೇಕಿಲ್ಲ. ಸರ್ಕಾರ ನಮ್ಮನ್ನು ತಡೆಯುವ ಪ್ರಯತ್ನ ಮಾಡಬಾರದು’ ಎಂದು ಎಚ್ಚರಿಸಿದರು.
ರೈತ ಹೋರಾಟಗಾರರು ಪ್ರತ್ಯೇಕವಾಗಿ ಪರೇಡ್ ಆರಂಭಿಸುತ್ತಿರುವ ಕುರಿತ ಪ್ರಶ್ನೆಗೆ, ‘ಈ ಹೋರಾಟಕ್ಕೆ ವಿವಿಧ ನಾಯಕರು ನಾಯಕತ್ವ ವಹಿಸಿದ್ದರೂ ಮಧ್ಯಾಹ್ನ 12ರ ಹೊತ್ತಿಗೆ ಸ್ವಾತಂತ್ರ್ಯ ಉದ್ಯಾನದಲ್ಲಿ ಒಟ್ಟಾಗಲಿದ್ದೇವೆ’ ಎಂದು ತಿಳಿಸಿದರು.
‘ರಾಜಕಾರಣಿಗಳ ಬೆಂಬಲವನ್ನು ನಾವು ಕೇಳಿಲ್ಲ. ಅವರು ಪ್ರತ್ಯೇಕವಾಗಿ ಹೋರಾಟ ಮಾಡಲಿ. ಮಂಗಳವಾರ ಅವರು ನಮ್ಮ ವೇದಿಕೆ ಹಂಚಿಕೊಳ್ಳಲು ಅವಕಾಶ ನೀಡುವುದಿಲ್ಲ’ ಎಂದೂ ಸ್ಪಷ್ಟಪಡಿಸಿದರು.
‘ಸಿನಿಮಾ ಡೈಲಾಗ್ ಹೊಡೆಯುವ ಕೃಷಿ ಸಚಿವ ಬಿ.ಸಿ. ಪಾಟೀಲ ಅವರಿಗೆ ರೈತರು ಸೊಪ್ಪು ಹಾಕುವುದಿಲ್ಲ. ಅವರೊಬ್ಬ ಸಿನಿಮಾ ಮಂತ್ರಿ. ಅವರಿಗೆ ಕೃಷಿಯ ಗಂಧವೇ ಗೊತ್ತಿಲ್ಲ’ ಎಂದರು.