ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.15ರ ಗದ್ದಲ: ಪ್ರಾಣೇಶ್, ಹೊರಟ್ಟಿ, ಮಾಧುಸ್ವಾಮಿ ಹಲವರ ನಿರ್ಬಂಧಕ್ಕೆ ಶಿಫಾರಸು

Last Updated 29 ಜನವರಿ 2021, 8:58 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಪರಿಷತ್‌ನಲ್ಲಿ ಉಪಸಭಾಪತಿ ಎಸ್.ಎಲ್. ಧರ್ಮೇಗೌಡ ಅವರನ್ನು ಸಭಾಪತಿ ಪೀಠದಲ್ಲಿ ಕೂರಿಸಿದ ಮತ್ತು ಅವರನ್ನು ಇಳಿಸಿ ಎಳೆದಾಟ ನೂಕಾಟ ನಡೆಸಿದ ಡಿ.15ರ ಘಟನೆಗೆ ಸಂಬಂಧಿಸಿದಂತೆ ಜೆಡಿಎಸ್‌ನ ಮರಿತಿಬ್ಬೇಗೌಡ ನೇತೃತ್ವದಸದನ ಸಮಿತಿಯ ಮಧ್ಯಂತರ ವರದಿ ಮಂಡನೆ ಆಗಿದೆ.

ವಿಧಾನಪರಿಷತ್ ಕಾರ್ಯದರ್ಶಿಕೆ.ಆರ್. ಮಹಾಲಕ್ಷ್ಮೀ ನಿಯಮಗಳ ಪ್ರಕಾರ ಜವಾಬ್ದಾರಿ ನಿರ್ವಹಿಸದೇ ಇರುವುದರಿಂದ ಈ ಘಟನೆ ನಡೆದಿದೆ. ಇದನ್ನು ಸದನ ಸಮತಿ ಖಂಡಿಸುತ್ತದೆ. ಅಂತಿಮ ವರದಿ ಬರುವವರೆಗೂ ಅವರು ಕಾರ್ಯದರ್ಶಿಯಾಗಿ ಮುಂದುವರೆಯದಂತೆ ಶಿಫಾರಸು ಮಾಡಿದೆ.

ಆಡಳಿತಾತ್ಮಕ ಕರ್ತವ್ಯ ನಿರ್ಲಕ್ಷ್ಯದ ಬಗ್ಗೆ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಈ ಬಗ್ಗೆ ಇಲಾಖಾತನಿಖೆ ನಡೆಸುವಂತೆ ಶಿಫಾರಸು ಮಾಡಲಾಗಿದೆ.

ಸಭಾಪತಿ ಪೀಠದಲ್ಲಿ ಕುಳಿತಿದ್ದ ಎಸ್.ಎಲ್. ಧರ್ಮೇಗೌಡ ಅವರು ಮೃತರಾಗಿರುವುದರಿಂದ ಅವರ ಮೇಲಿನ ವಿಚಾರಣೆಯನ್ನು ಕೈಬಿಡಲಾಗಿದೆ.

ಕಾನೂನುಬಾಹಿರವಾಗಿ ಉಪಸಭಾಪತಿಯನ್ನು ಸಭಾಪತಿ ಪೀಠದ ಮೇಲೆ ಕೂರಲು ಪ್ರೇರೇಪಿಸಿದ ಸಚಿವರಾದ ಜೆ.ಸಿ. ಮಾಧುಸ್ವಾಮಿ ಮತ್ತು ಅಶ್ವತ್ಥ ನಾರಾಯಣ ಅವರ ಕೃತ್ಯ ಸಿಡಿ ಮತ್ತು ಮಾಧ್ಯಮ ದೃಶ್ಯಗಳ ಮೂಲಕ ಸಾಬೀತಾಗಿದ್ದು, ಇವರಿಬ್ಬರು ಸರ್ಕಾರದ ಯಾವುದೇ ಜವಾಬ್ದಾರಿಯಲ್ಲಿ ಮುಂದುವರಿಯಬಾರದು ಎಂದು ಸಮಿತಿ ಹೇಳಿದೆ.

ಸಭಾಪತಿ ಆಗಮನದ ಪ್ರವೇಶ ದ್ವಾರವನ್ನು ಮುಚ್ಚಿ ಸಭಾಪತಿ ಆಗಮನವನ್ನು ತಡೆದ ಅಸಂಸದೀಯ ಮತ್ತು ಕಾನೂನು ಬಾಹಿರ ನಡವಳಿಕೆ ಪ್ರದರ್ಶಿಸಿದ ಸದಸ್ಯರಾದ ಎಂ.ಕೆ. ಪ್ರಾಣೇಶ್, ವೈ.ಎ. ನಾರಾಣಸ್ವಾಮಿ, ಅರುಣ್ ಶಹಾಪುರ ಕೃತ್ಯವು ದೃಶ್ಯಾವಳಿಗಳು, ಮಾರ್ಷಲ್‌ಗಳ ಹೇಳಿಕೆಗಳ ಮೂಲಕ ಧೃಡಪಟ್ಟಿದ್ದು, ಈ ಮೂವರನ್ನು ಮುಂದಿನ ಎರಡು ಅಧಿವೇಶನದ ಕಲಾಪದಲ್ಲಿ ಭಾಗವಹಿಸದಂತೆ ನಿರ್ಬಂಧಿಸಲು ಶಿಫಾರಸು ಮಾಡಲಾಗಿದೆ.

ಈ ಮಧ್ಯೆ ಎಂ.ಕೆ. ಪ್ರಾಣೇಶ್ ವಿಧಾನಪರಿಷತ್‌ನ ಉಪಸಭಾಪತಿಯಾಗಿ ಆಯ್ಕೆಯಾಗಿದ್ದು, ಸಮಿತಿಯ ಶಿಫಾರಸು ಯಾವ ರೀತಿ ಪರಿಣಾಮ ಬೀರಲಿದೆ ಎಂದು ಕುತೂಹಲಕ್ಕೆ ಎಡೆ ಮಾಡಿದೆ.

ಸದನವನ್ನು ಅನಿರ್ದಿಷ್ಟಾವಧಿಗೆ ‌ಮುಂದೂಡುವ ಮುನ್ನ ಆಡಳಿತ ಪಕ್ಷದವರ ಅಧ್ಯಕ್ಷರ ಪೀಠದಲ್ಲಿ ಕುಳಿತ ಚಂದ್ರಶೇಖರ ಪಾಟೀಲ್ ಅವರನ್ನು ಮುಂದಿನ ಒಂದು ಅಧಿವೇಶನದ ಕಲಾಪಕ್ಕೆ ನಿರ್ಬಂಧಿಸಲು ಶಿಫಾರಸು ಮಾಡಲಾಗಿದೆ.

ಈ ಮಧ್ಯೆ, ಉಪಸಭಾಪತಿಯನ್ನು ಪೀಠದಿಂದ ಬಲವಂತವಾಗಿ ಇಳಿಸಿದ ನಜೀರ್ ಅಹ್ಮದ್, ಎಂ. ನಾರಾಯಣಸ್ವಾಮಿ, ಶ್ರೀನಿವಾಸ್ ಮಾನೆ, ಪ್ರಕಾಶ್ ರಾಥೋಡ್ ಅವರ ಕೃತ್ಯವೂ ಸಾಬೀತಾಗಿರುವುದಾಗಿ ಸಮಿತಿ ಹೇಳಿದೆ. ಈ ಮೂವರನ್ನು ಮುಂದಿನ ಒಂದು ಅಧಿವೇಶನದ ಕಲಾಪದಲ್ಲಿ ಭಾಗವಹಿಸದಂತೆ ನಿರ್ಬಂಧಿಸಲು ಶಿಫಾರಸು ಮಾಡಲಾಗಿದೆ.

ಬಸವರಾಜ್ ಹೊರಟ್ಟಿ, ಕೆ.ಟಿ. ಶ್ರೀಕಂಠೇಗೌಡ ಮತ್ತು ಗೋವಿಂದರಾಜ್ ನಿಯಮಬಾಹಿರವಾಗಿ ಉಪಸಭಾಪತಿಯನ್ನು ಅಧ್ಯಕ್ಷರ ಪೀಠದ ಮೇಲೆ ಕೂರಿಸಿ ನಿಯಮಬಾಹಿರವಾಗಿ ಸದನ ನಡೆಸಲು ಯತ್ನಿಸಿದರು. ಉಪಸಭಾಪತಿಯನ್ನು ಕೆಳಗಿಳಿಸಿದ ನಂತರ ಅಶ್ವತ್ಥನಾರಾಯಣ ಜೊತೆ ಸೇರಿ ಶ್ರೀಕಂಠೇಗೌಡ ಮತ್ತು ಗೋವಿಂದರಾಜ್ ಮತ್ತೆ ಕೂರಿಸಲು ಯತ್ನಿಸಿರುವುದು ಸರ್ಕಾರಿ ಮತ್ತು ಖಾಸಗಿ ದೃಶ್ಯ ಮಾಧ್ಯಮಗಳ ಸಿಡಿಯಲ್ಲಿ ದೃಢಪಟ್ಟಿದೆ. ಈ ಮೂವರನ್ನು ಎರಡು ಅಧಿವೇಶನದ ಕಲಾಪಕ್ಕೆ ನಿರ್ಬಂಧಿಸಲು ಸಮಿತಿ ಶಿಫಾರಸು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT