ಬೆಂಗಳೂರು: ಆರ್ಎಸ್ಎಸ್ ಮತ್ತು ಬಿಜೆಪಿಯವರು ಛಲವಾದಿ ನಾರಾಯಣಸ್ವಾಮಿ ಅವರನ್ನು ಹಳೆಯ ಚೆಡ್ಡಿಗಳನ್ನು ಹೊರುವ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಎಚ್.ಸಿ.ಮಹದೇವಪ್ಪ ಲೇವಡಿ ಮಾಡಿದ್ದಾರೆ.
ಆರ್ಎಸ್ಎಸ್ ಮತ್ತು ಬಿಜೆಪಿ ಹಳೆಯ ಚಡ್ಡಿಗಳನ್ನು ಹೊರುವ ಕೆಲಸವನ್ನು ದಲಿತರಿಗೆ ಮತ್ತು ಹಿಂದುಳಿದವರಿಗೆ ಕೊಟ್ಟಿದ್ದಾರೆ. ‘ನಾರಾಯಣಸ್ವಾಮಿಯವರೇ ನಿಮಗೆ ಎಂಎಲ್ಸಿ ಸ್ಥಾನ ಕೊಟ್ಟಿರುವುದು ಜನರ ಹಿತ ಕಾಯಲೋ ಆರ್ಎಸ್ಎಸ್ವರ ಹಳೇ ಚಡ್ಡಿ ಹೊರಲೋ ಎಂಬುದನ್ನು ಸ್ಪಷ್ಟಪಡಿಸಲಿ’ ಎಂದಿದ್ದಾರೆ.
ಎಲ್ಲಕ್ಕಿಂತ ಮುಖ್ಯವಾಗಿ ಆರ್ಎಸ್ಎಸ್ನವರ ಚೆಡ್ಡಿ ಹೊರುವುದು ಮಲ ಹೊತ್ತಂತೆ. ಬಿಜೆಪಿ ದಲಿತರನ್ನು ಮತ್ತೆ ಹಳೆಯ ಅನಿಷ್ಟ ಪದ್ಧತಿಯೆಡೆಗೆ ಕೊಂಡೊಯ್ಯುತ್ತಿರುವುದು ಸಾಮಾಜಿಕ ದುರಂತ ಎಂದು ಅವರು ವ್ಯಾಖ್ಯಾನಿಸಿದ್ದಾರೆ.
ಬಿಜೆಪಿ ಮತ್ತು ಆರ್ಎಸ್ಎಸ್ ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರನ್ನು ಸದಾ ಕೆಳ ದರ್ಜೆಯ ಕೆಲಸಗಳಿಗೆ ಬಳಸಿಕೊಳ್ಳುತ್ತಾರೆ. ಚಿತ್ರದುರ್ಗದ ದೇವಸ್ಥಾನವೊಂದಕ್ಕೆ ಸಂಸದರಾಗಿದ್ದರೂ ದಲಿತ ಎಂಬ ಕಾರಣಕ್ಕೆ ಎ.ನಾರಾಯಣಸ್ವಾಮಿ ಅವರಿಗೆ ಪ್ರವೇಶ ನಿರಾಕರಿಸಲಾಯಿತು ಎಂದು ಮಹದೇವಪ್ಪ ಹೇಳಿದ್ದಾರೆ.
ಪಠ್ಯಪುಸ್ತಕದಲ್ಲಿ ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರ ಪಾಠಗಳನ್ನು ದುರುದ್ದೇಶದಿಂದಲೇ ತೆಗೆದುಹಾಕಿರುವ ಆರ್ಎಸ್ಎಸ್ ಕೆಳವರ್ಗದ ಹಿತಾಸಕ್ತಿಯನ್ನು ಮುಗಿಸಿ ಹಾಕುವ ಕಡೆಗೆ ದೃಢವಾದ ಹೆಜ್ಜೆ ಹಾಕುತ್ತಿದ್ದಾರೆ ಎಂದಿದ್ದಾರೆ.