ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಎಸ್‌ ಪಂಕಜಕುಮಾರ್‌ ಪಾಂಡೆ ವಿರುದ್ಧ ಸದನದಲ್ಲಿ ಸಚಿವ ಮುರುಗೇಶ ನಿರಾಣಿ ಕಿಡಿ

ಕಾಗದಪತ್ರಗಳಿಲ್ಲದೆಯೇ ₹50 ಕೋಟಿ ಹೂಡಿಕೆ: ವಿರೋಧ ಪಕ್ಷಗಳ ಗದ್ದಲ
Last Updated 20 ಸೆಪ್ಟೆಂಬರ್ 2022, 14:38 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನ ಪರಿಷತ್‌ ಕಲಾಪದಲ್ಲೇ ಕೈಗಾರಿಕೆ ಇಲಾಖೆ ಕಾರ್ಯದರ್ಶಿ ಪಂಕಜಕುಮಾರ್‌ ಪಾಂಡೆ ಅವರ ಹೆಸರು ಉಲ್ಲೇಖಿಸಿಸಚಿವ ಮುರುಗೇಶ ನಿರಾಣಿ ಅಸಮಾಧಾನ ವ್ಯಕ್ತಪಡಿಸಿದ್ದು, ತೀವ್ರ ಗದ್ದಲ ಸೃಷ್ಟಿಸಿತು.

ಮಂಗಳವಾರ ನಡೆದ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ಸುನೀಲ್‌ ವಲ್ಯಾಪುರೆ ಅವರ ಪ್ರಶ್ನೆಗೆ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಉತ್ತರ ನೀಡುತ್ತಿದ್ದಾಗ ಮಧ್ಯಪ್ರವೇಶಿಸಿದ ಸಚಿವ ನಿರಾಣಿ, ‘ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ನಾನು ಲೀಸ್‌ಗೆ ತೆಗೆದುಕೊಂಡಿದ್ದೇನೆ. ಕಾಗದಪತ್ರಗಳಿಲ್ಲದೆಯೇ ಸುಮಾರು ₹50 ಕೋಟಿ ಹೂಡಿಕೆ ಮಾಡಿದ್ದೇವೆ. ಆದರೆ, ಎರಡು ವರ್ಷಗಳಾದರೂ ಕಾರ್ಯದರ್ಶಿ ಪಂಕಜ ಕುಮಾರ್‌ ಪಾಂಡೆ ಒಪ್ಪಂದದ ಕಡತಗಳನ್ನು ವಿಲೇವಾರಿ ಮಾಡುತ್ತಿಲ್ಲ. ಕಡತಗಳನ್ನು ತಡೆ ಹಿಡಿದಿದ್ದಾರೆ. ಈ ರೀತಿ ವಿಳಂಬ ನೀತಿ ಅನುಸರಿಸಿದರೆ ಹೇಗೆ?’ ಎಂದು ಸದನದಲ್ಲೇ ಹಾಜರಿದ್ದ ಪಂಕಜಕುಮಾರ್‌ ಅವರತ್ತ ಕೈತೋರಿಸಿದೂರಿದರು.

ಅಧಿಕಾರಿ ವಿರುದ್ಧ ಸದನದಲ್ಲಿ ನೇರ ಆರೋಪ ಮಾಡಿದ್ದಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್‌ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ಈ ಕುರಿತು ಚರ್ಚೆಗೆ ಅವಕಾಶ ನೀಡುವಂತೆ ಪಟ್ಟು ಹಿಡಿದರು.

ವಿರೋಧ ಪಕ್ಷದ ಮುಖ್ಯ ಸಚೇತಕ ಪ್ರಕಾಶ್ ರಾಠೋಡ, ‘ಒಬ್ಬ ಮಂತ್ರಿ, ಅಧಿಕಾರಿಯ ಹೆಸರು ಪ್ರಸ್ತಾಪಿಸಿ ಎರಡು ವರ್ಷ ಕಡತಗಳನ್ನು ವಿಲೇವಾರಿ ಮಾಡಿಲ್ಲ ಎಂದು ಹೇಳಿದ್ದಾರೆ. ಅಧಿಕಾರಿಯನ್ನು ಅಮಾನತುಗೊಳಿಸಿ ಇಲ್ಲವೇ ಮಂತ್ರಿಗಳು ರಾಜೀನಾಮೆ ನೀಡಲಿ’ ಎಂದು ಒತ್ತಾಯಿಸಿದರು.

ಪಂಕಜಕುಮಾರ್ ಪಾಂಡೆ
ಪಂಕಜಕುಮಾರ್ ಪಾಂಡೆ

‘ಅಧಿಕಾರಿಗಳ ವಿರುದ್ಧ ಆರೋಪಿಸುತ್ತಿರುವ ನಿರಾಣಿ ಅವರು ಹಿರಿಯ ಸಚಿವರು. ಇಲ್ಲಿ ಸರ್ಕಾರ ಅಸ್ತಿತ್ವದಲ್ಲಿ ಇಲ್ಲ ಎನ್ನುವುದಕ್ಕೆ ಈ ಉದಾಹರಣೆ ಸಾಕ್ಷಿ’ ಎಂದೂ ದೂರಿದರು.

ಜೆಡಿಎಸ್‌ನ ಎಸ್.ಎಲ್‌. ಭೋಜೇಗೌಡ ಮತ್ತು ಟಿ.ಎ. ಶರವಣ ಅವರು, ‘ಒಬ್ಬ ಮಂತ್ರಿಗೆ ಈ ಪರಿಸ್ಥಿತಿಯಾದರೆ ಉಳಿದವರ ಗತಿ ಏನು? ಅಧಿಕಾರಿ ದೊಡ್ಡವರೋ ಅಥವಾ ಸರ್ಕಾರ ದೊಡ್ಡದೋ’ ಎಂದು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ನಿರಾಣಿ ಅವರ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಆಡಳಿತ ಪಕ್ಷದ ಸಚಿವರು ಮತ್ತು ಆಡಳಿತ ಪಕ್ಷದ ಸದಸ್ಯರು ಧಾವಿಸಿದರು.

‘ಕಾರ್ಯಾಂಗದಲ್ಲಿನ ಲೋಪದ ಬಗ್ಗೆ ಒಂದು ಘಟನೆಯನ್ನು ಸಚಿವರು ಉಲ್ಲೇಖಿಸಿದ್ದಾರೆ. ಸಚಿವರ ಮನಸ್ಸಿಗೆ ಘಾಸಿಯಾಗಿದ್ದಕ್ಕೆ ಹೇಳಿದ್ದಾರೆ’ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಬಿಜೆಪಿ ಸದಸ್ಯ ಲಕ್ಷ್ಮಣ ಸವದಿ ಸಮರ್ಥಿಸಿಕೊಂಡರು.

ಆಕ್ಷೇಪಗಳಿಗೆ ಪ್ರತಿಕ್ರಿಯಿಸಿದ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ‘ನಿರಾಣಿ ಅವರು ನೋವಿನ ಸಂಗತಿ ಹೇಳಿದ್ದಾರೆ. ಪಾಂಡವಪುರ ಸಕ್ಕರೆ ಕಾರ್ಖಾನೆಯ ಗುತ್ತಿಗೆಯನ್ನು ಟೆಂಡರ್‌ ಪ್ರಕ್ರಿಯೆ ಮೂಲಕ ನಿರಾಣಿ ಸಮೂಹ ಪಡೆದಿದ್ದು, ಸ್ಟ್ಯಾಂಪ್‌ ಶುಲ್ಕ ವಿನಾಯಿತಿ ನೀಡುವಂತೆ ಕೋರಿದ್ದಾರೆ. ಈ ಪ್ರಸ್ತಾವವನ್ನು ಹಣಕಾಸು ಇಲಾಖೆಗೆ ಸಲ್ಲಿಸಲಾಗಿದೆ. ಅಧಿಕಾರಿಗಳು ಸಹ ನೀತಿ, ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಮುಖ್ಯಮಂತ್ರಿ ಅವರು ಈ ವಿಷಯ ಇತ್ಯರ್ಥ ಮಾಡುತ್ತಾರೆ’ ಎಂದು ಸಮರ್ಥಿಸಿಕೊಂಡು ಚರ್ಚೆಗೆ ಅಂತ್ಯ ಹಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT