ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಸಹಭಾಗಿತ್ವಕ್ಕೆ ಮುಂದಾದ ಗೃಹ ಮಂಡಳಿ

ಭೂಸ್ವಾಧೀನ ಪಡಿಸಿಕೊಂಡು ಬಡಾವಣೆ ನಿರ್ಮಾಣ ಇಲ್ಲ: ಸಚಿವ ಸೋಮಣ್ಣ
Last Updated 7 ಜುಲೈ 2022, 20:04 IST
ಅಕ್ಷರ ಗಾತ್ರ

ಬೆಂಗಳೂರು: ಬಡಾವಣೆಗಳ ಅಭಿವೃದ್ಧಿಗೆ ಅಗತ್ಯವಾದ ಜಮೀನು ಸಿಗುತ್ತಿಲ್ಲ, ಜೊತೆಗೆ ಭೂಮಿ ಬೆಲೆ ಹೆಚ್ಚಳಗೊಂಡಿರುವುದರಿಂದ ಭೂಸ್ವಾಧೀನಪಡಿಸಿ‌ಕೊಂಡು ಹೊಸ ಬಡಾವಣೆ ಅಭಿವೃದ್ಧಿಪಡಿಸದೇ ಇರಲು ಕರ್ನಾಟಕ ಗೃಹ ಮಂಡಳಿ ನಿರ್ಧರಿಸಿದೆ.

ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ವಸತಿ ಸಚಿವ ವಿ. ಸೋಮಣ್ಣ, ‘ಕನಿಷ್ಠ 50 ಎಕರೆ ಜಮೀನು ಇರುವ ಮಾಲೀಕರು ಮುಂದೆ ಬಂದರೆ ಖಾಸಗಿ ಸಹಭಾಗಿತ್ವದಲ್ಲಿ ನಗರ ಪ್ರದೇಶದಲ್ಲಿ 50:50, ಗ್ರಾಮೀಣ ಭಾಗದಲ್ಲಿ ‌60:40 ಆಧಾರದಲ್ಲಿ ಬಡಾವಣೆ ನಿರ್ಮಿಸಲಾಗುವುದು’ ಎಂದರು.

‘ಮೈಸೂರು, ಬಳ್ಳಾರಿ, ವಿಜಯಪುರ, ಗದಗ, ನೆಲಮಂಗಲ ಸೇರಿ ರಾಜ್ಯದ ವಿವಿಧೆಡೆ ಗೃಹ ಮಂಡಳಿ ಈಗಾಗಲೇ ಅಭಿವೃದ್ಧಿಪಡಿಸಿರುವ ಬಡಾವಣೆಗಳಲ್ಲಿ 6,015 ನಿವೇಶನಗಳನ್ನು ಮೂರು ತಿಂಗಳಲ್ಲಿ ವಿತರಿಸಲಾಗುವುದು. ನಿವೇಶನಕ್ಕೆ ಅರ್ಜಿ ಸಲ್ಲಿಸಿದವರಿಗೆ ಲಾಟರಿ ಮೂಲಕ ಹಂಚಿಕೆ ಮಾಡಲಾಗುವುದು’
ಎಂದರು.

‘ಈ ಬಡಾವಣೆಗಳಲ್ಲಿನ ಮೂಲೆ ನಿವೇಶನಗಳನ್ನು ಹರಾಜು ಹಾಕಲಾಗುವುದು. ನಾಗರಿಕ ಸೌಲಭ್ಯಕ್ಕೆ (ಸಿಎ) ಮೀಸಲಿಟ್ಟ ಜಾಗವನ್ನು ಆಸ್ಪತ್ರೆ, ಶಾಲೆ, ನಗರಸಭೆ-ಪುರಸಭೆ, ಗ್ರಾಮ ಪಂಚಾಯಿತಿ ಕಟ್ಟಡಗಳಿಗೆ ನೀಡಲಾಗುವುದು. ಖಾಸಗಿ ಸಂಘ-ಸಂಸ್ಥೆಗಳು, ಸೇವಾ ಸಂಸ್ಥೆಗಳು ಅರ್ಜಿ ಹಾಕಿದರೆ ಶೇ 30ರಷ್ಟು ರಿಯಾಯಿತಿಯಲ್ಲಿ ನೀಡಲಾಗುವುದು’ ಎಂದೂ ಹೇಳಿದರು.

‘ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಒಂದು ಲಕ್ಷ ಮನೆ ಯೋಜನೆಯಡಿ
48 ಸಾವಿರ ಮನೆಗಳ ನಿರ್ಮಾಣ ಭರದಿಂದ ಸಾಗಿದೆ. 1,967 ಮನೆಗಳನ್ನು ಇದೇ ತಿಂಗಳಲ್ಲಿ ಹಂಚಿಕೆ ಮಾಡಲಾಗುವುದು. ಈ ವರ್ಷದಲ್ಲಿ 20 ಸಾವಿರ ಮನೆ ಹಂಚಿಕೆ ಮಾಡಲು ಉದ್ದೇಶಿಸಲಾಗಿದೆ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT