ಶಿವಮೊಗ್ಗ: ಪ್ರವಾದಿ ಮೊಹಮ್ಮದ್ ಬಗ್ಗೆ ನೂಪುರ್ ಶರ್ಮಾ ಹಾಗೂ ನವೀನ್ ಜಿಂದಾಲ್ ಅವಹೇಳನಕಾರಿಯಾಗಿ ಮಾತನಾಡಿದ್ದ ಪ್ರಕರಣದಿಂದ ದೇಶದ ಜನರ ಗಮನ ಬೇರೆಡೆ ಸೆಳೆಯಲು ಇಡಿ ಮುಂದಿಟ್ಟುಕೊಂಡು ನ್ಯಾಷನಲ್ ಹೆರಾಲ್ಡ್ ವಿಚಾರ ಮುನ್ನೆಲೆಗೆ ತರಲಾಗಿದೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಆರೋಪಿಸಿದರು.
ತೀರ್ಥಹಳ್ಳಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘2012ರಲ್ಲಿ ಸುಬ್ರಹ್ಮಣ್ಯಸ್ವಾಮಿ ಖಾಸಗಿ ದೂರು ಕೊಟ್ಟಿದ್ದು. ಅದು 'ಬಿ' ರಿಪೋರ್ಟ್ ಹಾಕುವ ಪ್ರಕರಣವಾದರೂ ಒತ್ತಡದ ಮೇಲೆ ಎಫ್ಐಆರ್ ದಾಖಲಿಸಲಾಗಿತ್ತು. 2017ರಲ್ಲಿ ಇಡಿ ಆ ಕೇಸ್ ಮುಚ್ಚಿತ್ತು. ಈಗ ರಾಜಕೀಯ ದ್ವೇಷದಿಂದ ಮತ್ತೆ ಅದಕ್ಕೆ ಜೀವ ನೀಡಲಾಗಿದೆ‘ ಎಂದರು.
ಬ್ರಿಟಿಷರಿಗೆ ಗುಲಾಮರಾಗಿ ಇದ್ದವರಲ್ಲ ನಾವು (ಕಾಂಗ್ರೆಸ್). ಕ್ಷಮಾಪಣೆ ಪತ್ರವನ್ನು ಬರೆದುಕೊಟ್ಟವರು ಅಲ್ಲ. ಕಾಂಗ್ರೆಸ್ ಸ್ವಾತಂತ್ರ್ಯಕ್ಕೆ ಹೋರಾಡಿದ ಪಕ್ಷ. ಬ್ರಿಟಿಷರ ಲಾಠಿ–ಬೂಟಿಗೆ ಹೆದರಿಲ್ಲ. ಇನ್ನು ಇಡಿ, ಐಟಿ, ಸಿಬಿಐಗೆ ಹೆದರುತ್ತೇವೆಯೇ? ಎಂದು ಪ್ರಶ್ನಿಸಿದರು.