ಬೆಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ ಪಾಠವನ್ನು ಕನ್ನಡ ಭಾಷಾ ವಿಷಯದಿಂದ ಕೈಬಿಟ್ಟು ಸಮಾಜ ವಿಜ್ಞಾನ ಪಠ್ಯದಲ್ಲಿ ಅಳವಡಿಸಲು ಸರ್ಕಾರ ಆದೇಶ ಹೊರಡಿಸಿದೆ.
ರೋಹಿತ್ ಚಕ್ರತೀರ್ಥ ಸಮಿತಿ ಪರಿಷ್ಕರಿಸುವ ಮುನ್ನ ನಾರಾಯಣಗುರು ಅವರ ಬದುಕು, ಚಿಂತನೆ, ಹೋರಾಟ ಪರಿಚಯಿಸುವ ಪಠ್ಯ ಸಮಾಜ ವಿಜ್ಞಾನ ಪಠ್ಯದಲ್ಲಿತ್ತು. ಪರಿಷ್ಕರಣೆ ಬಳಿಕ, 10ನೇ ತರಗತಿಯ ಕನ್ನಡ ಭಾಷಾ ಪುಸ್ತಕದಲ್ಲಿ ಸೇರಿಸಲಾಗಿತ್ತು. ಪರಿಷ್ಕರಣೆಗೆ ಹಿಂದಿನ ಪಠ್ಯದಲ್ಲಿದ್ದ ವಿವರಗಳನ್ನು ಕಡಿತಗೊಳಿಸಲಾಗಿತ್ತು.
ಸರ್ಕಾರದ ಈ ನಡೆ ಆಕ್ರೋಶಕ್ಕೆ ಕಾರಣವಾಗಿತ್ತು. ಆದರೆ, ಸಚಿವ ಬಿ.ಸಿ. ನಾಗೇಶ್, ಯಾವುದೇ ಬದಲಾವಣೆ ಮಾಡಿಲ್ಲ ಎಂದೂ ಪ್ರತಿಪಾದಿಸಿದ್ದರು. ಆಕ್ರೋಶ ತೀವ್ರಗೊಂಡ ಬಳಿಕ, ಮರು ಪರಿಷ್ಕರಣೆಗೆ ಸರ್ಕಾರ ಮುಂದಾಯಿತು.
ಇಲಾಖೆ ಹೊರಡಿಸಿದ ಆದೇಶದಲ್ಲಿ, ನಾರಾಯಣಗುರು ಅವರ ಪಾಠವನ್ನು 10ನೇ ತರಗತಿಯ ಸಮಾಜ ವಿಜ್ಞಾನ ಭಾಗ 1ರಲ್ಲಿ ಅಳವಡಿಸಿಕೊಂಡು 2022–23ನೇ ಸಾಲಿನಿಂದಲೇ ಬೋಧನೆ, ಕಲಿಕೆ, ಮೌಲ್ಯಮಾಪನಕ್ಕೆ ಪರಿಗಣಿಸುವಂತೆ ಸೂಚಿಸಲಾಗಿದೆ.