ಬೆಂಗಳೂರು: ‘ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಮಹಾ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ಮತ್ತುರಾಜ್ಯ ಘಟಕದಅಧ್ಯಕ್ಷ ಎನ್.ತಿಪ್ಪಣ್ಣ ಮಹಾಸಭಾದ ಸ್ಥಾನಗಳನ್ನು ರಾಜಕಾರಣಕ್ಕೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದು ಅವರನ್ನು ಪದಚ್ಯುತಗೊಳಿಸಬೇಕು ಮತ್ತು ಮಹಾಸಭಾದಲ್ಲಿ ಲಿಂಗಾಯತ ಪದ ಸೇರ್ಪಡೆಗೆ ತಡೆ ನೀಡಬೇಕು’ ಎಂದು ಕೋರಲಾದ ಸಿವಿಲ್ ದಾವೆಗೆ ಸಂಬಂಧಿಸಿ ಮೂರು ಜನರಿಗೆ ತುರ್ತು ನೋಟಿಸ್ ಜಾರಿ ಗೊಳಿಸಲು ಬೆಂಗಳೂರು ಸಿಟಿ ಸಿವಿಲ್ ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.
ಈ ಕುರಿತಂತೆ ಎಸ್.ಎನ್.ಕೆಂಪಣ್ಣ ಸೇರಿದಂತೆ ಐವರು ಸಲ್ಲಿಸಿರುವ ದಾವೆಯನ್ನು 9ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ಮುಮ್ತಾಜ್, ಪ್ರತಿವಾದಿಗಳ ಗೈರು ಹಾಜರಿಯಲ್ಲಿ ಆಲಿಸಿದರು. ನೋಟಿಸ್ ಜಾರಿಗೆ ಆದೇಶಿಸಿ 2023ರ ಫೆ.17ಕ್ಕೆವಿಚಾರಣೆ ಮುಂದೂಡಿದರು.
ದಾವೆಯಲ್ಲಿ ಏನಿದೆ?: ‘ಮಹಾಸಭಾ 2020ರಲ್ಲಿ ತನ್ನ ಬೈ–ಲಾ ನಿಯಮಗಳ ತಿದ್ದುಪಡಿ ಮೂಲಕ ಲಿಂಗಾಯತ ಪದವನ್ನು ವೀರಶೈವದ ಜೊತೆ ಸೇರಿಸಿದೆ. ಇದು ವೀರಶೈವರು ಮತ್ತು ಲಿಂಗಾಯತರನ್ನು ಪ್ರತ್ಯೇಕ ಎಂದು ಗುರುತಿಸಿದಂತಾಗುತ್ತದೆ. ಅಖಿಲ ಭಾರತ ವೀರಶೈವ ಮಹಾಸಭಾದ ಹೆಸರನ್ನು ಅಖಿಲ ಭಾರತ ವೀರಶೈವ–ಲಿಂಗಾಯತ ಮಹಾಸಭಾ ಎಂದು ಬಳಸದಂತೆ ತಡೆ ನೀಡಬೇಕು’ ಎಂದು ದಾವೆದಾರರು ಕೋರಿದ್ದಾರೆ.
‘ಶಾಮನೂರು ಶಿವಶಂಕರಪ್ಪಹಾಲಿ ಕಾಂಗ್ರೆಸ್ ಪಕ್ಷದ ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದು 91 ವರ್ಷವಾಗಿದೆ. ಅವರ ದೈಹಿಕ ಮತ್ತು ಮಾನಸಿಕ ದೃಢತೆ ಮಹಾಸಭಾದ ಅಧ್ಯಕ್ಷ ಸ್ಥಾನ ನಿಭಾಯಿಸುವಷ್ಟು ಸಾಮರ್ಥ್ಯ ಹೊಂದಿಲ್ಲ. ಈಶ್ವರ ಖಂಡ್ರೆ ಕೂಡಾ ಕಾಂಗ್ರೆಸ್ ಶಾಸಕರಾಗಿದ್ದಾರೆ. ಇವರು ಮಹಾಸಭಾವನ್ನು ರಾಜಕೀಯ ವೇದಿಕೆಯಾಗಿ ಬಳಸಿಕೊಳ್ಳುತ್ತಿದ್ದಾರೆ’ ಎಂದು ದಾವೆದಾರರು ಆಪಾದಿಸಿದ್ದಾರೆ.
‘ಮಹಾಸಭಾ ಪದಾಧಿಕಾರಿಗಳು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಂದ ಹೊರತಾಗಿರಬೇಕು. ಹಾಗಾಗಿ, ಈ ಸಂಬಂಧ ಘನ ನ್ಯಾಯಾಲಯ ಸೂಕ್ತ ಡಿಕ್ರಿ ಹೊರಡಿಸಬೇಕು’ ಎಂದು ಕೋರಿದ್ದಾರೆ.ದಾವೆದಾರರ ಪರ ಶರತ್ ಎಸ್.ಗೋಗಿ ಹಾಜರಾಗಿದ್ದರು.
ಮಹಾಧಿವೇಶನ ಮುಂದೂಡಿಕೆ: ‘ಇದೇ 24ರಿಂದ ಮೂರು ದಿನ ದಾವಣ ಗೆರೆಯಲ್ಲಿ ಆಯೋಜಿಸಿದ್ದ ಮಹಾಸಭಾದ 23ನೇ ಮಹಾಧಿವೇಶನವನ್ 2023ರ ಫೆಬ್ರುವರಿ 11, 12 ಮತ್ತು 13ಕ್ಕೆ ಮುಂದೂ ಡಲಾಗಿದೆ‘ ಎಂದು ಖಂಡ್ರೆ ಅವರು ಹೇಳಿಕೆ ನೀಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.