ಅಮೀನಗಡ (ಬಾಗಲಕೋಟೆ): ಸಮೀಪದ ಸಿದ್ಧನಕೊಳ್ಳದ ಸಿದ್ಧಿಪುರುಷ ಸಿದ್ದಪ್ಪಜ್ಜ ಹೆಸರಿನಲ್ಲಿ ಪ್ರತಿ ವರ್ಷ ನೀಡುವ ‘ಸಿದ್ಧಶ್ರೀ’ ರಾಷ್ಟ್ರೀಯ ಪ್ರಶಸ್ತಿಗೆ ಚಿತ್ರ ನಿರ್ಮಾಪಕ ಆರ್.ವಿ.ಗುರುಪಾದಂ ಆಯ್ಕೆಯಾಗಿದ್ದಾರೆ.
7ನೇ ಸಿದ್ಧಶ್ರೀ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾದ ಗುರುಪಾದಂ ಮೂಲತಃ ಹುಬ್ಬಳ್ಳಿಯ ರಾಮಾಪುರದವರು. ಕನ್ನಡ, ತೆಲುಗು, ತಮಿಳು ಸೇರಿದಂತೆ ಸುಮಾರು 10 ಭಾಷೆಗಳಲ್ಲಿ ಒಟ್ಟು 27 ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಬಾಲಿವುಡ್ ನಟಿ ಶ್ರೀದೇವಿ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದವರೂ ಗುರುಪಾದಂ ಅವರೆ.
ಪ್ರಶಸ್ತಿಯು ₹25 ಸಾವಿರ ನಗದು, ಪ್ರಶಸ್ತಿ ಪತ್ರ, ನಾಮಫಲಕ ಹೊಂದಿದೆ ಎಂದು ಸಿದ್ಧನಕೊಳ್ಳ ಡಾ.ಶಿವಕುಮಾರ ಸ್ವಾಮೀಜಿ ತಿಳಿಸಿದ್ದಾರೆ.
ಇದುವರೆಗೂ ಅಣ್ಣಾಹಜಾರೆ, ಪುಟ್ಟರಾಜ ಗವಾಯಿ, ನಟ ಉಮೇಶ ಪುರಾಣಿಕ, ಮಹೇಶ ಜೋಶಿ, ಮೋಹನ ಆಳ್ವ, ಮಧುಶ್ರೀ ಭಟ್ಟಾಚಾರ್ಯ ‘ಸಿದ್ಧಶ್ರೀ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.