ಅಂಕೋಲಾ (ಉತ್ತರ ಕನ್ನಡ ಜಿಲ್ಲೆ): ‘ಉತ್ತರ ಕನ್ನಡವು ಭೌಗೋಳಿಕವಾಗಿ ವಿಸ್ತಾರವಾಗಿದ್ದು ಪ್ರಗತಿ ಮತ್ತು ಬೆಳವಣಿಗೆಯ ದೃಷ್ಟಿಯಿಂದ ಇನ್ನೊಂದು ಜಿಲ್ಲೆಯಾಗಬೇಕು. ಹೊಸ ಜಿಲ್ಲೆಯ ಕೇಂದ್ರವನ್ನು ಜನ ನಿರ್ಧರಿಸಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ ಜೋಶಿ ಹೇಳಿದರು. ಇದಕ್ಕೆ ಹಲವರಿಂದ ಖಂಡನೆ ವ್ಯಕ್ತವಾದ ಬಳಿಕ ಅವರು ಸ್ಪಷ್ಟನೆಯನ್ನೂ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕವು ಪಟ್ಟಣದಲ್ಲಿ ಸೋಮವಾರ ಆಯೋಜಿಸಿದ್ದ ‘ಅಕ್ಷರೋತ್ಸವ’ ಕಾರ್ಯಕ್ರಮದಲ್ಲಿ ಜೋಶಿ ಮಾತನಾಡಿ, ಜಿಲ್ಲೆಯ ವಿಭಜನೆಯ ಬಗ್ಗೆ ಪ್ರಸ್ತಾಪಿಸಿದರು.
‘ಕನ್ನಡ ಸಾಹಿತ್ಯ ವೇದಿಕೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು. ಜಿಲ್ಲೆಯ ಜನರು ಭಾವನಾತ್ಮಕವಾಗಿ ಬೆಸೆದುಕೊಂಡಿದ್ದಾರೆ. ಈಗಷ್ಟೇ ವಿಭಜನೆಯ ವಿವಾದ ತಣ್ಣಗಾಗಿದೆ. ಮಹೇಶ ಜೋಶಿಯವರು ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ’ ಎಂದು ಸಾಹಿತಿಗಳು, ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.
ಸಿ.ಐ.ಟಿ.ಯು ರಾಜ್ಯ ಘಟಕದ ಕಾರ್ಯದರ್ಶಿ ಯಮುನಾ ಗಾಂವ್ಕರ್, ಸಾಹಿತಿ ಮಹಾಂತೇಶ ರೇವಡಿ, ಪರಿಷತ್ನ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ರೋಹಿದಾಸ ನಾಯಕ ಮುಂತಾದವರು ಹೇಳಿಕೆಯನ್ನು ಖಂಡಿಸಿದರು.
ಬಳಿಕ ಸ್ಪಷ್ಟನೆ ನೀಡಿದ ಮಹೇಶ ಜೋಶಿ, ‘ಇದು ಸಾಹಿತ್ಯ ಪರಿಷತ್ ನಿಲುವಲ್ಲ; ನನ್ನ ವೈಯಕ್ತಿಕ ಹೇಳಿಕೆ. ಜಿಲ್ಲೆಯ ಅಭಿವೃದ್ಧಿಯ ದೂರದೃಷ್ಟಿಯಿಂದ ಹೇಳಿದ್ದೇನೆ ವಿನಾ ರಾಜಕೀಯವಾಗಿ ಅಲ್ಲ’ ಎಂದರು.