ಬೆಂಗಳೂರು: ಪರಿಸರ ಮತ್ತು ಅರಣ್ಯ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ ನದಿಗಳಲ್ಲಿ ಮರಳು ಗಾಣಿಗಾರಿಕೆ ನಡೆಸಲು ಮಳೆಗಾಲದಲ್ಲಿ ಅವಕಾಶ ಇಲ್ಲ ಎಂದು ಹೈಕೋರ್ಟ್ ಹೇಳಿದೆ.
2020ರ ಜೂನ್ನಲ್ಲಿ ಚಾಮರಾಜನಗರದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪ ನಿರ್ದೇಶಕರು ಹೊರಡಿಸಿರುವ ಆದೇಶ ಸಂಬಂಧ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ಈ ಆದೇಶ ನೀಡಿತು.
‘ಮರಳು ಗಣಿಗಾರಿಕೆಗೆ ಐದು ವರ್ಷಗಳ ಅವಧಿಗೆ ಅನುಮತಿ ನೀಡಿ 2017ರ ಆಗಸ್ಟ್ 10ರಂದು ಅನುಮತಿ ನೀಡಲಾಗಿದೆ. ಮಳೆಗಾಲದಲ್ಲಿ ಮರಳು ಗಣಿಗಾರಿಕೆಗೆ ಅವಾಕಾಶ ಇಲ್ಲ. ಆದರೆ, ಗುತ್ತಿಗೆ ಕರಾರಿನಲ್ಲಿ ಈ ನಿರ್ಬಂಧ ವಿಧಿಸಿಲ್ಲ. ಈ ಸಂಬಂಧ ರಾಜ್ಯದಲ್ಲಿ ನಿಯಮಾವಳಿಯೂ ಇಲ್ಲ’ ಎಂದು ಅರ್ಜಿದಾರರು ತಿಳಿಸಿದ್ದಾರೆ.
‘ಪರಿಸರ ಮತ್ತು ಅರಣ್ಯ ಸಚಿವಾಲಯ ಹೊರಡಿಸಿರುವ ಮಾರ್ಗಸೂಚಿಗಳ 10ನೇ ಷರತ್ತಿನಲ್ಲಿ ಮಳೆಗಾಲದಲ್ಲಿ ನದಿ ಮರಳು ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂದು ಸ್ಪಷ್ಟವಾಗಿ ಹೇಳಿದೆ. ರಾಜ್ಯದಲ್ಲಿ ಜೂನ್ 5ರಿಂದ ಅಕ್ಟೋಬರ್ 15ರ ತನಕ ಮಳೆಗಾಲ ಇರುವ ಕಾರಣ ಆ ಸಂದರ್ಭದಲ್ಲಿ ನದಿಗಳಲ್ಲಿ ಮರಳು ಗಣಿಗಾರಿಕೆಗೆ ಅವಕಾಶ ನೀಡಬಾರದು’ ಎಂದು ಪೀಠ ತಿಳಿಸಿದೆ.