ಸೌದಿ ಅರೇಬಿಯಾ ತಲುಪಬೇಕಾದ ಉದ್ಯಮಿಗಳು, ನೌಕರರು ದುಬೈಗೆ ತೆರಳಿ, ಅಲ್ಲಿ 14 ದಿನಗಳ ಕ್ವಾರಂಟೈನ್ ಮುಗಿಸಿ ಸೌದಿಗೆ ತೆರಳುತ್ತಿದ್ದರು. ಕ್ವಾರಂಟೈನ್ ವ್ಯವಸ್ಥೆಯೊಂದಿಗೆ ದುಬೈ ತಲುಪಿರುವ ಕನ್ನಡಿಗರು, ಅನಿರೀಕ್ಷಿತ ನಿರ್ಬಂಧದಿಂದಾಗಿ ಇದೀಗ ಸರಿಯಾದ ಊಟ, ಆಹಾರ, ವಸತಿ ವ್ಯವಸ್ಥೆಯಿಲ್ಲದೆ ಕಂಗಾಲಾಗಿದ್ದಾರೆ. ಈ ನಡುವೆ ವಿಸಿಟ್ ವೀಸಾ ಅವಧಿ ಮುಗಿದರೆ ದಂಡ ಕಟ್ಟಲು ಹಣವಿಲ್ಲದೆ ಪರದಾಡಬೇಕಾದ ಪರಿಸ್ಥಿತಿ ಎದುರಾಗಬಹುದೆಂಬ ಭೀತಿಯೂ ಅವರನ್ನು ಕಾಡುತ್ತಿದೆ. ಕೂಡಲೇ ವಿದೇಶಾಂಗ ಸಚಿವರೊಂದಿಗೆ ಸಮಾಲೋಚನೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೆಸಿಎಫ್ ಯುಎಇ ಸಮಿತಿ ಅಧ್ಯಕ್ಷ ಅಬ್ದುಲ್ ಜಲೀಲ್ ನಿಝಾಮಿ ಮನವಿ ಮಾಡಿದ್ದಾರೆ.