ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಂಶುಪಾಲರ ಹುದ್ದೆಗೆ ವಯೋಮಿತಿ ನಿಗದಿ: ತೀವ್ರ ಆಕ್ಷೇಪ

Last Updated 1 ಜುಲೈ 2021, 21:50 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 310 ಪ್ರಾಂಶುಪಾಲರ ನೇಮಕಕ್ಕೆ 55 ವರ್ಷ ವಯೋಮಿತಿ ನಿಗದಿ‍ಪಡಿಸಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ರಾಜ್ಯ ಸರ್ಕಾರಿ ಕಾಲೇಜು ಅಧ್ಯಾಪಕರ ಸಂಘ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಈ ಬಗ್ಗೆ ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಅವರಿಗೆ ಮನವಿ ಸಲ್ಲಿಸಿರುವ ಸಂಘ, ಪ್ರಾಂಶುಪಾಲರ ಹುದ್ದೆಯ ನೇಮಕಕ್ಕೆ ನಿಗದಿಪಡಿಸಿರುವ ವಯೋಮಿತಿಯನ್ನು ತೆಗೆದು ಹಾಕಬೇಕು ಎಂದು ಆಗ್ರಹಿಸಿದೆ.

ಯುಜಿಸಿಯ ನಿಯಮಾವಳಿಯಲ್ಲೂ ವಯೋಮಿತಿಯ ಪ್ರಸ್ತಾವ ಇಲ್ಲ. ಹೀಗಿರುವಾಗ ಸರ್ಕಾರದ ಈ ನಡೆ ಸರಿಯಲ್ಲ. ಇದನ್ನು ತೆಗೆದು ಹಾಕದಿದ್ದರೆ ಅಧ್ಯಾಪಕರು ನ್ಯಾಯಾಲಯದ ಮೆಟ್ಟಿಲೇರುವುದು ಖಚಿತ. ಇದರಿಂದ ಇಡೀ ನೇಮಕಾತಿ ಪ್ರಕ್ರಿಯೆಯೇ ಸ್ಥಗಿತಗೊಳ್ಳಲಿದೆ ಎಂದೂ ಸಂಘ ಎಚ್ಚರಿಕೆ ನೀಡಿದೆ.

ರಾಜ್ಯದಲ್ಲಿ 435 ಸರ್ಕಾರಿ ಕಾಲೇಜುಗಳ ಪೈಕಿ 1ರಲ್ಲಿ ಮಾತ್ರ ಕಾಯಂ ಪ್ರಾಂಶುಪಾಲ ಇದ್ದಾರೆ. ಉಳಿದ ಕಡೆ ಪ್ರಭಾರ ಪ್ರಾಂಶುಪಾಲರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. 12 ವರ್ಷಗಳಿಂದ ಕಾಯಂ ಪ್ರಾಂಶುಪಾಲರ ನೇಮಕ ಆಗಿಲ್ಲ. ಯುಜಿಸಿ ನಿಯಮದ ನೆಪವೊಡ್ಡಿ ಪ್ರಾಂಶುಪಾಲರ ಹುದ್ದೆಗಳಿಗೆ ಅಧ್ಯಾಪಕರುಗಳಿಗೆ ನೀಡುತ್ತಿದ್ದ ಪದೋನ್ನತಿಯನ್ನು ನಿರಾಕರಿಸಲಾಗಿತ್ತು. ಇದೀಗ ವಯೋಮಿತಿ ನಿಗದಿಪಡಿಸಿ ನೇಮಕಾತಿ ಅಧಿಸೂಚನೆ ಹೊರಡಿಸಿದ್ದರಿಂದ ಅಧ್ಯಾಪಕ ವರ್ಗದಲ್ಲಿ ನಿರಾಶೆ ಮೂಡಿದೆ. ಅಲ್ಲದೆ, ಪ್ರಾಂಶುಪಾಲ ಹುದ್ದೆಗಳು ಸರ್ಕಾರಿ ಕಾಲೇಜುಗಳ ಹೆಚ್ಚಿನ ಅಧ್ಯಾಪಕರಿಗೆ ದೊರೆಯುವುದೇ ಅನುಮಾನ ಎಂಬ ಸ್ಥಿತಿ ನಿರ್ಮಾಣವಾಗಿದೆ ಎಂದೂ ಮನವಿಯಲ್ಲಿ ಸಂಘ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT