ಬೆಂಗಳೂರು:ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಮೈಸೂರು-ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದ ವಿ. ಶ್ರೀನಿವಾಸ ಪ್ರಸಾದ್ ದೀರ್ಘಕಾಲದ ಬಳಿಕ ಪರಸ್ಪರ ಮುಖಾಮುಖಿಯಾದರು.
ರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನ ಮಾಡುವುದಕ್ಕಾಗಿ ಶ್ರೀನಿವಾಸ ಪ್ರಸಾದ್ ಸೋಮವಾರ ಮಧ್ಯಾಹ್ನ ವಿಧಾನಸೌಧಕ್ಕೆ ಬಂದಿದ್ದರು. ಅವರು ಮತ ಚಲಾಯಿಸಿ ಹಿಂದಿರುಗುತ್ತಿದ್ದಾಗ ಸಿದ್ದರಾಮಯ್ಯ ಮತಗಟ್ಟೆಯತ್ತ ಹೊರಟಿದ್ದರು. ಇಬ್ಬರೂ ವಿಧನಾಸೌಧದ ಮೊದಲನೇ ಮಹಡಿಯ ಮೊಗಸಾಲೆಯಲ್ಲಿ ಮುಖಾಮುಖಿಯಾದರು.
ನಗುತ್ತಾ ಹಸ್ತಲಾಘವ ಮಾಡಿಕೊಂಡರು. ಕೆಲಕಾಲ ಮಾತುಕತೆ ನಡೆಸಿದ ನಾಯಕರು ಅಲ್ಲಿಂದ ನಿರ್ಗಮಿಸಿದರು.
ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಕಂದಾಯ ಸಚಿವರಾಗಿದ್ದ ಪ್ರಸಾದ್ ಅವರನ್ನು ಸಂಪುಟ ಪುನರ್ರಚನೆ ವೇಳೆ ಕೈಬಿಡಲಾಗಿತ್ತು. ಆ ಬಳಿಕ ಸಿದ್ದರಾಮಯ್ಯ ವಿರುದ್ಧ ಮುನಿಸಿಕೊಂಡಿದ್ದ ಅವರು, ತೀವ್ರ ವಾಗ್ದಾಳಿಗೆ ಇಳಿದಿದ್ದರು. ನಂತರ ಬಿಜೆಪಿ ಸೇರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಸಂಸದರಾಗಿದ್ದರು.