ಬೆಂಗಳೂರು: ರಾಜ್ಯ ಪ್ರವಾಸ ಕೈಗೊಂಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ನೋಟು ರದ್ದು, ಕೃಷಿ ಕಾಯ್ದೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನೆ ಕೇಳಿದ್ದಾರೆ.
‘ಆನ್ಸರ್ ಮಾಡಿ ಅಮಿತ್ ಶಾ’ ಹೆಸರಿನಲ್ಲಿ ಸರಣಿ ಟ್ವೀಟ್ ಮಾಡಿರುವ ಅವರು, ‘ಸಹಕಾರ ಸಮ್ಮೇಳನಲ್ಲಿ ಭಾಷಣ ಆರಂಭಿಸುವ ಮುನ್ನ ಈ ಪ್ರಶ್ನೆಗಳಿಗೆ ಉತ್ತರಿಸಿ’ ಎಂದು ಕೇಳಿದ್ದಾರೆ.
‘ಸಹಕಾರ ಸಮ್ಮೇಳನಕ್ಕೆ ಅದ್ದೂರಿ ಚಾಲನೆ ನೀಡುತ್ತಿದ್ದೀರಿ. ಈ ಮೂಲಕ ಸಹಕಾರ ಸಂಸ್ಥೆಗಳನ್ನು ಭ್ರಷ್ಟಾಚಾರದ ಕೇಂದ್ರಗಳನ್ನಾಗಿ ಮಾಡಿಕೊಳ್ಳುವ ಬಗ್ಗೆ ಕರ್ನಾಟಕದ ಬಿಜೆಪಿ ನಾಯಕರಿಗೆ ತರಬೇತಿ ನೀಡುತ್ತೀರಾ’ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.
‘ರಾಜ್ಯ ಸರ್ಕಾರ ಯಶಸ್ವಿನಿ ಯೋಜನೆಯನ್ನು ಮರು ಆರಂಭಿಸಿದೆ. ನೀವು ಈ ಯೋಜನೆಗೆ ಚಾಲನೆ ನೀಡುತ್ತಿದ್ದೀರಿ. ಅಂದರೆ, ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯು ವಿಫಲ ವಾಗಿದೆಯೇ’ ಎಂದು ಪ್ರಶ್ನಿಸಿದ್ದಾರೆ.
‘ನೋಟು ರದ್ದುಗೊಳಿಸುವ ಹಗರಣಕ್ಕೆ ಮುನ್ನ ಸಹಕಾರ ಬ್ಯಾಂಕ್ಗಳ ಜತೆಗಿನ ನಿಮ್ಮ ಸಂಬಂಧ ಏನು’ ಎಂದು ಪ್ರಶ್ನಿಸಿ ದ್ದಾರೆ.
‘ನೋಟು ರದ್ದುಗೊಳಿಸಿದ ದಿನದ ಅದೇ ರಾತ್ರಿ ₹500 ಕೋಟಿ ಮೊತ್ತವನ್ನು ಎಡಿಸಿ ಬ್ಯಾಂಕ್ನಲ್ಲಿ ಠೇವಣಿ ಇರಿಸಲಾಯಿತು. ಈ ಬ್ಯಾಂಕ್ನಲ್ಲಿ ನೀವೇ ನಿರ್ದೇಶಕರಾಗಿದ್ದೀರಿ’ ಎಂದು ಹೇಳಿದ್ದಾರೆ.