ಬೆಂಗಳೂರು: ಯುಗಾದಿ ಹಬ್ಬ ಎದುರಾಗುತ್ತಿರುವಾಗ ಆರಂಭವಾಗಿರುವ ಸಾರಿಗೆ ನೌಕರರ ಮುಷ್ಕರದಿಂದ ಸಾರ್ವಜನಿಕರಿಗೆ ಆಗುತ್ತಿರುವ ಅನಾನುಕೂಲ ತಪ್ಪಿಸಲು ಏ.14ರ ತನಕ 9 ವಿಶೇಷ ರೈಲುಗಳ ಸಂಚಾರಕ್ಕೆ ನೈರುತ್ಯ ರೈಲ್ವೆ ಮುಂದಾಗಿದೆ. ಬೆಂಗಳೂರಿನಿಂದ ಬೇರೆ ಬೇರೆ ಜಿಲ್ಲೆಗಳಿಗೆ ಒಟ್ಟು 22 ಟ್ರಿಪ್ಗಳಲ್ಲಿ ವಿಶೇಷ ರೈಲುಗಳು ಸಂಚರಿಸಲಿವೆ.
ಏ.8ರಂದು ಹುಬ್ಬಳ್ಳಿಯಿಂದ ಯಶವಂತಪುರಕ್ಕೆ(ರೈಲು ಗಾಡಿ ಸಂಖ್ಯೆ 06545) ಬರುವ ರೈಲು, ಏ.9ರಂದು ಯಶವಂತಪುರದಿಂದ ವಿಜಯಪುರಕ್ಕೆ(06546) ತೆರಳಲಿದೆ. ಏ.9ರಂದು ಯಶವಂತಪುರದಿಂದ ಬೆಳಗಾವಿಗೆ(06547) ತೆರಳಿ ಏ.14ರಂದು ವಾಪಸ್ ಯಶವಂತಪುರಕ್ಕೆ(06548) ಬರಲಿದೆ.
ಏ.10ರಂದು ಯಶವಂತಪುರದಿಂದ ಬೆಳಗಾವಿಗೆ(06557) ತೆರಳಲಿರುವ ವಿಶೇಷ ರೈಲು, ಏ.11ರಂದು ಯಶವಂತಪುರಕ್ಕೆ(06558) ವಾಪಸ್ ಆಗಲಿದೆ. ಏ.9ರಂದು ಮೈಸೂರನಿಂದ ಬೀದರ್ಗೆ(06215) ಬೆಂಗಳೂರು ಮಾರ್ಗದಲ್ಲಿ ಹೋಗುವ ರೈಲು, ಏ.10ರಂದು ಮೈಸೂರಿಗೆ(06216) ಅದೇ ಮಾರ್ಗದಲ್ಲಿ ವಾಪಸ್ ಆಗಲಿದೆ.
ಏ.10ರಂದು ಯಶವಂತಪುರದಿಂದ ಬೀದರ್ಗೆ(06551) ತೆರಳಿ, ಏ.11ರಂದು ಯಶವಂತಪುರಕ್ಕೆ(06552) ಮರಳಲಿದೆ. ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ(ಕೆಎಸ್ಆರ್) ರೈಲು ನಿಲ್ದಾಣದಿಂದ ಮೈಸೂರಿಗೆ(06554) ಮತ್ತು ಮೈಸೂರನಿಂದ ಬೆಂಗಳೂರಿಗೆ(06553) ಏ.9, 10 ಮತ್ತು 14ರಂದು ವಿಶೇಷ ರೈಲು ಸಂಚರಿಸಲಿದೆ.
ಯಶವಂತಪುರದಿಂದ ಮೈಸೂರಿಗೆ(06556) ಮತ್ತು ಮೈಸೂರಿನಿಂದ ಯಶವಂತಪುರಕ್ಕೆ(06555) ಏ.9, 10 ಮತ್ತು 14ರಂದು ಮತ್ತೊಂದು ವಿಶೇಷ ರೈಲು ಕಾರ್ಯಾಚರಣೆ ಮಾಡಲಿದೆ.
ಯಶವಂತಪುರದಿಂದ ಶಿವಮೊಗ್ಗಕ್ಕೆ(06511) ಏ.9ರಂದು ತೆರಳುವ ರೈಲು, ಏ.10ರಂದು ಕೆಎಸ್ಆರ್ ರೈಲು ನಿಲ್ದಾಣಕ್ಕೆ(06512) ವಾಪಸ್ ಆಗಲಿದೆ. ಏ.9ರಂದು ಯಶವಂತಪುರದಿಂದ ಕಾರವಾರಕ್ಕೆ ತೆರಳುವ ರೈಲು(06513) ಏ.10ರಂದು ಯಶವಂತಪುರಕ್ಕೆ(06514) ವಾಪಸ್ ಆಗಲಿದೆ. ಈ ವಿಶೇಷ ರೈಲುಗಳಿಗೆ ವಿಶೇಷ ದರ ನಿಗದಿ ಮಾಡಲಾಗುವುದು ಎಂದು ನೈರುತ್ಯ ರೈಲ್ವೆ ತಿಳಿಸಿದೆ.