ನೆಲಮಂಗಲ: ಟೆಂಟ್ ಶಾಲೆಯಿಂದ ಆರಂಭವಾಗಿ ಸಕಲ ಸೌಕರ್ಯಗಳುಳ್ಳ ಶಾಲೆಯಾಗಿ ಪರಿವರ್ತನೆಯಾಗಿರುವುದು ಶ್ಲಾಘನೀಯ ಎಂದು ಶಿಕ್ಷಣ ಸಚಿವ ಎಸ್.ಸುರೇಶ್ಕುಮಾರ್ ತಿಳಿಸಿದರು.
ಪಟ್ಟಣದ ಅಂಬೇಡ್ಕರ್ ನಗರದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ದುರಸ್ತಿಗೊಳಿಸಿದ ಕೊಠಡಿಗಳು, ಧ್ವಜಸ್ತಂಭ, ಕಾಂಪೌಂಡ್, ಶೌಚಾಲಯ ಉದ್ಘಾಟಿಸಿ ಮಾತನಾಡಿದರು.
ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ’ಶಿಕ್ಷಕ ನಾಗರಾಜು ಅವರು ಸ್ವಂತ ₹8 ಲಕ್ಷ ವೆಚ್ಚದಲ್ಲಿ ಶಾಲೆಯನ್ನು ನವೀಕರಿಸಿರುವುದು, ಶಿಕ್ಷಣ ಎಲ್ಲರಿಗೂ ಸಿಗಬೇಕು ಎನ್ನುವ ಕಾಳಜಿಯನ್ನು ತೋರಿಸುತ್ತದೆ. ಗುಡಿಸಿಲಿನಲ್ಲಿರುವ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆತಂತಾಗಿದೆ‘ ಎಂದರು.
ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಮಾತನಾಡಿ, ’ಸಿದ್ದಲಿಂಗ ಶ್ರೀಗಳ ಆಶಯದಂತೆ ಶಾಲೆಯನ್ನು ದತ್ತು ಪಡೆದು, ಅಭಿವೃದ್ಧಿಗೆ ₹5 ಲಕ್ಷ ನೀಡಲಾಗಿದೆ‘ ಎಂದರು.
ಮಾಜಿ ಶಾಸಕ ಎಂ.ವಿ.ನಾಗರಾಜು, ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಎಚ್.ಮಾರೇಗೌಡ, ಬಿಎಂಟಿಸಿ ನಿರ್ದೇಶಕ ಕೆ.ಪಿ.ಭೃಂಗೇಶ್, ತಹಶೀಲ್ದಾರ್ ಕೆ.ಮಂಜುನಾಥ್, ದಾನಿ ಶಿಕ್ಷಕ ಎನ್.ನಾಗರಾಜು ಇದ್ದರು.