ಬಿಡದಿ: ಕಾರ್ಮಿಕರು ಹಾಗೂ ಆಡಳಿತ ಮಂಡಳಿ ನಡುವಿನ ಬಿಕ್ಕಟ್ಟಿನಿಂದಾಗಿ ಬಿಡದಿಯ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್ ಕಾರ್ಖಾನೆ ಮತ್ತೊಮ್ಮೆ ಲಾಕೌಟ್ ಆಗಿದೆ. ಸೋಮವಾರದಿಂದಲೇ ಕಾರ್ಖಾನೆಯ ಬಾಗಿಲು ಮುಚ್ಚಲಾಗಿದೆ.
‘ಸರ್ಕಾರದ ಆದೇಶದಂತೆ ಇದೇ ತಿಂಗಳ 19ರಂದು ಕಾರ್ಖಾನೆಯ ಬಾಗಿಲು ತೆರೆಯಲಾಗಿತ್ತು. ಆದರೆ ನೌಕರರು ಅಕ್ರಮವಾಗಿ ಮುಷ್ಕರ ಮುಂದುವರೆಸಿದ್ದಾರೆ. ಕಾರ್ಖಾನೆಯಲ್ಲಿ ಉತ್ಪಾದನಾ ಚಟುವಟಿಕೆಗಳು ನಡೆಯಲು ಕನಿಷ್ಠ ನೌಕರರು ಬೇಕು. ಕಾರ್ಮಿಕರ ಕೊರತೆಯಿಂದಾಗಿ ಕಾರ್ಖಾನೆಯ ಕಾರ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗುತ್ತಿದೆ’ ಎಂದು ಕಾರ್ಖಾನೆ ಆಡಳಿತ ಮಂಡಳಿಯ ಪ್ರಕಟಣೆ ತಿಳಿಸಿದೆ.
ಇತ್ತ ಟಿಕೆಎಂ ನೌಕರರು ಮತ್ತು ಕಾರ್ಮಿಕರು ಕಾರ್ಖಾನೆ ಮುಂಭಾಗ ಮಂಗಳವಾರವೂ ಪ್ರತಿಭಟನೆ ಮುಂದುವರೆಸಿದ್ದಾರೆ. ‘ಕಾರ್ಖಾನೆಯಲ್ಲಿ ಕೆಲಸ ಮಾಡಲು ನಾವು ಸಿದ್ಧರಿದ್ದೇವೆ. ಆದರೆ ಒಂದಿಲ್ಲೊಂದು ನೆಪವೊಡ್ಡಿ ನಮ್ಮನ್ನು ಬಾಗಿಲಲ್ಲೇ ತಡೆಯಲಾಗುತ್ತಿದೆ’ ಎಂದು ಪ್ರತಿಭಟನಾನಿರತ ಕಾರ್ಮಿಕರು ಆರೋಪಿಸಿದ್ದಾರೆ.
‘ಇದೀಗ ನಿಯಮಬಾಹಿರವಾಗಿ ಮತ್ತೆ ಲಾಕೌಟ್ ಮಾಡಲಾಗಿದೆ. ಈ ಪ್ರಕರಣ ತಾರ್ಕಿಕ ಅಂತ್ಯ ಕಾಣುವವರೆಗೂ ಕಾರ್ಮಿಕರ ಹೋರಾಟ ಮುಂದುವರೆಯಲಿದೆ’ ಎಂದು ಟಿಕೆಎಂ ನೌಕರರ ಸಂಘದ ಅಧ್ಯಕ್ಷ ಪ್ರಸನ್ನ ಕುಮಾರ್ ಸ್ಪಷ್ಟಪಡಿಸಿದ್ದಾರೆ.
**
ಸರ್ಕಾರ, ಕಾರ್ಮಿಕ ಇಲಾಖೆ ಈಗಾಲಾದರೂ ಮಧ್ಯಪ್ರವೇಶಿಸಿ ಟೊಯೊಟೊ ನೌಕರರು ಮತ್ತು ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯ ತಡೆಯಬೇಕು. -ಪ್ರಸನ್ನ ಕುಮಾರ್, ಟಿಕೆಎಂ ನೌಕರರ ಸಂಘದ ಅಧ್ಯಕ್ಷ