ಬೆಂಗಳೂರು: ಉತ್ಥಾನ ಮಾಸ ಪತ್ರಿಕೆಯು ರಾಜ್ಯಮಟ್ಟದ ವಾರ್ಷಿಕ ಕಥಾ ಸ್ಪರ್ಧೆ ಆಯೋಜಿಸಿದ್ದು, ಇದಕ್ಕಾಗಿ ಕಥೆಗಳನ್ನು ಆಹ್ವಾನಿಸಿದೆ.
‘ಒಬ್ಬರು ಒಂದು ಕಥೆಯನ್ನಷ್ಟೇ ಕಳುಹಿಸಬಹುದು. ಸ್ವರಚಿತವಾದ ಆ ಕಥೆಯು 3,000 ಪದಗಳ ಮಿತಿಯಲ್ಲಿರಬೇಕು. ಅನುವಾದಿತ ಕಥೆಗಳಿಗೆ ಅವಕಾಶವಿಲ್ಲ. ಪರಿಶೀಲನೆಗಾಗಿ ಯಾವುದೇ ಪತ್ರಿಕೆ, ಸಂಸ್ಥೆಗೆ ಅದನ್ನು ಕಳುಹಿಸಿರಬಾರದು. ಸಾಮಾಜಿಕ ಜಾಲತಾಣಗಳಲ್ಲಿಯೂ ಪ್ರಕಟಗೊಂಡಿರಬಾರದು’ ಎಂದು ರಾಷ್ಟ್ರೋತ್ಥಾನ ಪರಿಷತ್ನ ಪ್ರಧಾನ ಕಾರ್ಯದರ್ಶಿ ನಾ.ದಿನೇಶ್ ಹೆಗ್ಡೆ ತಿಳಿಸಿದ್ದಾರೆ.
‘ಕಾಗದದ ಒಂದು ಬದಿಯಲ್ಲಿ ಅಂದವಾಗಿ ಹಾಗೂ ಸ್ಪಷ್ಟವಾಗಿ ಕಥೆಯನ್ನು ಬರೆದು ಅದನ್ನು ಅಂಚೆ ಮೂಲಕ ಕಳುಹಿಸಬಹುದು. ನುಡಿ, ಬರಹ, ಯೂನಿಕೋಡ್ ತಂತ್ರಾಂಶಗಳಲ್ಲಿ ಸಿದ್ಧಪಡಿಸುವವರು utthanakathaspardhe@gmail.com ಗೆ ಇ–ಮೇಲ್ ಕೂಡ ಮಾಡಬಹುದು. ಹಸ್ತಪ್ರತಿಯನ್ನು ವಾಪಸ್ ಕಳುಹಿಸಲಾಗುವುದಿಲ್ಲ. ಹೀಗಾಗಿ ಲೇಖಕರು ಮೂಲ ಕಥೆಯ ಮತ್ತೊಂದು ಪ್ರತಿಯನ್ನು ತಮ್ಮ ಬಳಿಯೇ ಇಟ್ಟುಕೊಂಡಿರಬೇಕು’ ಎಂದಿದ್ದಾರೆ.
ಲೇಖಕರು ತಮ್ಮ ಹೆಸರು, ವಿಳಾಸ ಹಾಗೂ ಇತರ ವಿವರಗಳನ್ನು ಪ್ರತ್ಯೇಕ ಪುಟದಲ್ಲಿ ಬರೆದಿರಬೇಕು. ಅದರ ಜೊತೆಗೆ ಭಾವಚಿತ್ರವೂ ಇರಬೇಕು. ಪ್ರವೇಶ ಕಳುಹಿಸಲು ಅಕ್ಟೋಬರ್ 31 ಕೊನೆಯ ದಿನ.
ಸಂಪಾದಕರು, ಉತ್ಥಾನ ವಾರ್ಷಿಕ ಕಥಾ ಸ್ಪರ್ಧೆ–2021, ಕೇಶವ ಶಿಲ್ಪ, ಕೆಂಪೇಗೌಡನಗರ, ಬೆಂಗಳೂರು–560004 ಈ ವಿಳಾಸಕ್ಕೆ ಅಂಚೆಯ ಮೂಲಕ ಕಥೆಗಳನ್ನು ಕಳುಹಿಸಬಹುದು.
ವಿಜೇತರಿಗೆ ₹15 ಸಾವಿರ ಬಹುಮಾನ ಕೊಡಲಾಗುತ್ತದೆ. ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆಯುವವರಿಗೆ ಕ್ರಮವಾಗಿ ₹12 ಹಾಗೂ ₹10 ಸಾವಿರ ಬಹುಮಾನ ಸಿಗಲಿದೆ. ಐದು ಮಂದಿಗೆ ತಲಾ ₹2 ಸಾವಿರ ವಿಶೇಷ ಬಹುಮಾನ ನೀಡಲಾಗುತ್ತದೆ.