ಕ್ಷೇತ್ರಕಾರ್ಯ ಮಾಡುವ ಸಂಶೋಧನಾಸಕ್ತಿಯಿಂದ ಇದು ಅನಿವಾರ್ಯ ಕೂಡ ಆಗಿತ್ತು. ತೇಜಸ್ವಿಯವರ ಕರ್ವಾಲೋ ಕಾದಂಬರಿಯಲ್ಲಿ ಪ್ರಸ್ತಾಪಗೊಂಡಿರುವ ಗುತ್ತಿ ಊರು ಸೇರಿದಂತೆ ತ್ರಿಪುರ, ಕೊಟ್ರಕೆರೆ, ಹೆಸಗೂಡು, ಹಳ್ಳಿಬೈಲು, ಮೂಲರಹಳ್ಳಿ ಹೆಸರಿನ ಇಲ್ಲಿನ ಸುತ್ತಮುತ್ತಲ ಸ್ಥಳಗಳು ಹೃದಯಂಗಮವಾಗಿದೆ. ಇದೆಲ್ಲವನ್ನು ಕಾಯುವ ಪರಿಸರದ ಒಡೆಯ ದೇವರಮನೆಯ ಕಾಲಭೈರವ. ಶಿವನು ರೈತರ ನೇಗಿಲಮಿತ್ರ ಎತ್ತಿನೊಂದಿಗೆ ಮೊದಲಬಾರಿಗೆ ಬಂದಿಳಿದ ಪ್ರದೇಶವಿದು ಎಂಬ ಐತಿಹ್ಯ ಕೂಡ ಇಲ್ಲಿಗಿದೆ.