ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೇಪಾಕ್ಷಿ ಛಾಯಾಗ್ರಾಹಕರ ಸ್ಟುಡಿಯೊ

Last Updated 6 ಫೆಬ್ರುವರಿ 2019, 19:30 IST
ಅಕ್ಷರ ಗಾತ್ರ

ಲೇಪಾಕ್ಷಿ, ಕೇವಲ ದೇಗುಲವಿರುವ ಅಧ್ಯಾತ್ಮ ತಾಣವಷ್ಟೇ ಅಲ್ಲ, ಅದೊಂದು ವಾಸ್ತುಶಿಲ್ಪದ ಕಣಜ. ವಿಜಯನಗರದ (ಹಂಪಿ) ಚರಿತ್ರೆಯ ಆಂತರಿಕ ಕೊಂಡಿಯಾಗಿ ಈ ತಾಣ ನೆನಪಾಗುತ್ತದೆ.

ವೀರಭದ್ರನ ಸುಂದರ ಶಿಲ್ಪ ಮೈಮನಗಳನ್ನು ರೋಮಾಂಚನಗೊಳಿಸುತ್ತದೆ. ವೀರಭದ್ರನ ಪತ್ನಿ ಭದ್ರಕಾಳಿ, ರಾಮಲಿಂಗ, ಹನುಮಲಿಂಗ ಹಲವು ದೇವಾನುದೇವತೆಗಳ ಶಿಲ್ಪಗಳು ವಾಸ್ತುಶಿಲ್ಪದ ಭಾಗವಾಗಿ ಆಸ್ತಿಕರನ್ನು ಆಕರ್ಷಿಸುವ ಈ ದೇವಾಲಯ ಸಂಕೀರ್ಣ ವಿಜಯನಗರ ಶಿಲ್ಪಶೈಲಿಯ ಪಡಿಯಚ್ಚು.

ಲೇಪಾಕ್ಷಿ, ಆಂಧ್ರದಲ್ಲಿದ್ದರೂ ಅಲ್ಲಿನ ದೇಗುಲದಲ್ಲಿರುವ ಕನ್ನಡ ಶಾಸನಗಳು ‘ಕನ್ನಡ ದೇಶ’ದ ಆಳರಸರ ದಾನ–ಧರ್ಮ ಸಹಿಷ್ಣು ಆಳ್ವಿಕೆಯ ಕಥೆ ಹೇಳುತ್ತವೆ. ತುಮಕೂರು ಜಿಲ್ಲೆಯ ಮಧುಗಿರಿ ಬಳಿ ಕರ್ನಾಟಕ ಗಡಿಯಿಂದ 28 ಕಿ.ಮೀ. ದೂರದಲ್ಲಿರುವ ಈ ದೇಗುಲದಲ್ಲಿ ಕನ್ನಡದ ಕಥೆ ಹೇಳುವ ಶಾಸನಗಳಿವೆ. ರಾಜ್ಯಗಳ ಪುನರ್ ವಿಂಗಡನೆಯ ಸಂದರ್ಭದಲ್ಲಿ ಹಿಂದೂಪುರ ತಾಲ್ಲೂಕು ನೆರೆಯ ಆಂಧ್ರಪ್ರದೇಶದ ಪಾಲಾದರೂ, ವಿಜಯನಗರ ಸಾಮ್ಯಾಜ್ಯದ ಧರ್ಮ ಸಹಿಷ್ಣು ಅಸ್ಮಿತೆಯಾಗಿರುವ ಈ ದೇಗುಲ ಸಂಕೀರ್ಣಕ್ಕೆ ಕನ್ನಡದ ಬಹು ಭಕ್ತರೊಂದಿಗೆ ದೇಶ-ವಿದೇಶಗಳ ಪ್ರವಾಸಿಗರನ್ನು ಸೆಳೆಯುತ್ತಿದೆ.

ಕ್ರಿ.ಶ. 1533ರಲ್ಲಿ ವಿಜಯನಗರದ ಅರಸು ಅಚ್ಯುತರಾಯನ ಅಧೀನ ಅಧಿಕಾರಿಯಾಗಿದ್ದ ವಿರುಪಣ್ಣನು ಈ ದೇಗುಲವನ್ನು ನಿರ್ಮಿಸಿದನೆಂದು ದೇಗುಲದ ಒಳಗೆ ಇರುವ ಕನ್ನಡದ ಶಿಲಾಶಾಸನ ಹೇಳುತ್ತದೆ. ವೀರಭದ್ರ ದೇಗುಲದ ಪಶ್ಚಿಮ ದಿಕ್ಕಿನಲ್ಲಿ ಅಳಿದುಹೋದ ಇತಿಹಾಸ ನೆನಪಿಸುವ ವೈಭವೋಪೇತ ಕಲ್ಯಾಣ ಮಂಟಪ ಲೇಪಾಕ್ಷಿಯ ಭವ್ಯ ಚರಿತೆಯನ್ನೇ ತೆರೆದಿಡುತ್ತದೆ. ಹತ್ತು ಹಲವು ಐತಿಹ್ಯ, ಪ್ರತೀತಿ, ಕಥೆಗಳಿಗೆ ಜೀವಸೆಲೆಯಾದ ಈ ಕಲ್ಯಾಣಮಂಟಪ ಯಾತ್ರಿಕರಿಗೆ, ಚಿತ್ರ ಕಲಾವಿದರಿಗೆ, ಛಾಯಾಗ್ರಾಹಕರಿಗೆ ಬಯಲು ಆಲಯವೆಂಬ ಸ್ಟುಡಿಯೋ! ಈ ಸ್ಟುಡಿಯೋ ಹಲವಾರು ಛಾಯಾಗ್ರಾಹಕರಿಗೆ ಲ್ಯಾಂಡ್‍ಸ್ಕೇಪ್ ಫೋಟೊಗ್ರಫಿ ಮತ್ತು ಪಿಕ್ಟೋರಿಯಲ್ ಫೋಟೊಗ್ರಫಿಗೆ ಅತ್ಯುತ್ತಮ ನೆಲೆಯೂ ಹೌದು.

ಮಧ್ಯದಲ್ಲಿ ದೇಗುಲಗಳ ಸಂಕೀರ್ಣ, ಸುತ್ತಲೂ ಶಿಲೆಯಲ್ಲಿ ನಿರ್ಮಾಣವಾದ ಪೌಳಿಗೆ ಹೊಂದಿಕೊಂಡಿರುವ ಮಂಟಪಸಾಲುಗಳು ಚರಿತ್ರೆಯ ಸಾಲುಗಳನ್ನು ಸಾರುತ್ತವೆ. ದೇಗುಲದ ಹಿಂಬದಿಯ ಬಂಡೆಯಲ್ಲಿಯೇ ಒಡಮೂಡಿರುವ ಬೃಹತ್ ನಾಗಶಿಲ್ಪ ಹಾಗೂ ಗಣಪನ ವಿಗ್ರಹ. ಕಲ್ಯಾಣ ಮಂಟಪಕ್ಕೆ ಹೊಂದಿಕೊಂಡಿರುವ ರೋಮ್‍ನ ‘ಹೆರಾ II, ಪೇಸ್ಟ್‍ಮ್’ ವಾಸ್ತುಶಿಲ್ಪವನ್ನು ನೆನಪಿಸುವ ಮಂಟಪಗಳು ಬಯಲು ಆಲಯದ ಶೂಟಿಂಗ್ ಸ್ಟಾಟ್‍ಗಳು!

ಇಲ್ಲಿನ ಆಲ್ಬಮ್‍ನಲ್ಲಿ ಶಿಲ್ಪ ಮತ್ತು ವಾಸ್ತುಶಿಲ್ಪದ ಚಿತ್ರಗಳೊಂದಿಗೆ ಈ ಬಯಲು ಆಲಯವನ್ನು ಯಾತ್ರಿಕರು ಹೇಗೆ ಸಂಭ್ರಮಿಸುತ್ತಾರೆ ಎಂಬ ದೃಶ್ಯ-ಲಹರಿಯೂ ನಿಮ್ಮನ್ನು ಲೇಪಾಕ್ಷಿಗೆ ಕರೆದೊಯ್ಯಬಹುದು. ಒಂದೆರಡ್ಮೂರು ಗಾಢವರ್ಣದ ವೇಷಭೂಷಣದ ಮಾನವಾಕೃತಿಗಳು ಸಹಜನಡೆಯಲ್ಲಿ ವಾಸ್ತುವಿನ ಭಾಗವಾಗಿ ಇದ್ದರೆ ಅದರ ಚೆಂದವೇ ಬೇರೆ. ಛಾಯಾಗ್ರಹಣದ ಮಾಡೆಲ್ ಆಗಿ ನನ್ನ ಶಿಷ್ಯ ಜಾನ್ ಅರ್ಚಕನ ದಿರಿಸು ಧರಿಸಿ ಇಲ್ಲಿನ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾನೆ. ಹಾಗೆಯೇ ಯಾತ್ರಿಕರು, ಮಕ್ಕಳು ಸಹ ಚಿತ್ರದಲ್ಲಿ ಕಾಣಿಸಿಕೊಂಡಿರುವುದರಿಂದ ಇಲ್ಲಿನ ವಾಸ್ತು ಚಿತ್ರಣಗಳು ವಾಸ್ತುಶಿಲ್ಪದ ಗಾತ್ರವನ್ನು ಸ್ಪಷ್ಟಗೊಳಿಸುತ್ತವೆ. ಜೊತೆಗೆ ವಾಸ್ತುಶಿಲ್ಪದ ಚಿತ್ರಣದಲ್ಲಿ ಮೋಡಗಳು ಚೆಲ್ಲಾಟ ಇದ್ದರಂತೂ ಇಡೀ ಚಿತ್ರ ಅಂದಗಾಣುತ್ತದೆ.

ಕಲ್ಯಾಣ ಮಂಟಪದಲ್ಲಿ ದೇವಾನುದೇವತೆಗಳ ಶಿಲ್ಪಗಳು ಆಳೆತ್ತರದವು. ತಂಬೂರ, ದತ್ತಾತ್ರೇಯ, ಬ್ರಹ್ಮ, ನಾರದ, ರಂಭೆ, ಪದ್ಮಿನಿ ಮತ್ತು ನಟರಾಜ ಈ ಶಿಲ್ಪಗಳಿಗೆ ಕಂಬಗಳು ಆಧಾರಸ್ತಂಭಗಳಾಗಿ ಆಸರೆ-ಆಶ್ರಯ ನೀಡಿವೆ. ಕಲ್ಯಾಣ ಮಂಟಪದಲ್ಲಿ ನಿತ್ಯ ಪ್ರಿ ವೆಡ್ಡಿಂಗ್ ಫೋಟೊಗ್ರಫಿಯಲ್ಲಿ ಕಾಣಿಸಿಕೊಳ್ಳುವ ಭಾವೀ ನವದಂಪತಿಗಳು ಇನ್ನೇನು ತಮ್ಮ ಮದುವೆ ಇಲ್ಲಿಯೇ ನೆರವೇರುತ್ತದೆ ಎಂಬ ಭಾವೋನ್ಮಾದದಲ್ಲಿ ಇಲ್ಲಿ ಕಾಣಿಸಿಕೊಳ್ಳುವುದು ಸಹಜ.

ಊಟ – ವಸತಿ ಹೇಗಿದೆ?
ವಸತಿ ಮತ್ತು ಊಟೋಪಚಾರಕ್ಕೆ ಆಂಧ್ರಪ್ರದೇಶ ಪ್ರವಾಸೋದ್ಯಮ ಇಲಾಖೆಯ ಲೇಪಾಕ್ಷಿ ಹರಿತಾ ಹೋಟೆಲ್‍ನ ದೂರವಾಣಿ ಸಂಖ್ಯೆ: 090002 82897 ಸಂಪರ್ಕಿಸಬಹುದು.

ಆಂಧ್ರಪ್ರದೇಶ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದಲ್ಲಿರುವ ನಂದಿನಿ ಹೋಟೆಲ್‍ನಲ್ಲಿ₹60 ಗೆ ಆಂಧ್ರಶೈಲಿಯ ಸಸ್ಯಾಹಾರಿ ಭೋಜನ ಮನೆಯೂಟವನ್ನು ನೆನಪಿಸುತ್ತದೆ.

ದೇಗುಲದ ಹೊರ ಆವರಣದಲ್ಲಿ ಅಗತ್ಯ ನಾಗರಿಕ ಸವಲತ್ತುಗಳು ಸಹ ಇವೆ. ಸೋಮವಾರ ಮತ್ತು ರಜಾದಿನಗಳಲ್ಲಿ ಹೆಚ್ಚಿನ ಜನದಟ್ಟಣೆ ಇರುತ್ತದೆ. ಜುಲೈನಿಂದ ಅಕ್ಟೋಬರ್ ಮಧ್ಯಭಾಗ ಛಾಯಾಗ್ರಹಣಕ್ಕೆ ಸೂಕ್ತವಾದ ಅವಧಿ.

ಹೋಗುವುದು ಹೇಗೆ?
ಲೇಪಾಕ್ಷಿ ಆಂಧ್ರಪ್ರದೇಶದ ಅನಂತಪುರ ಜಿಲ್ಲಾ ಕೇಂದ್ರದಿಂದ 15 ಕಿ.ಮೀ, ಹಿಂದೂಪುರದಿಂದ 13 ಕಿ.ಮೀ ಅಂತರವಿದೆ. ಬೆಂಗಳೂರಿನಿಂದ ಗೌರಿಬಿದನೂರು, ಹಿಂದೂಪುರ ಮಾರ್ಗವಾಗಿ 116 ಕಿ.ಮೀ., ಹಾಗೂ ತುಮಕೂರಿನಿಂದ ಮಧುಗಿರಿ, ಹಿಂದೂಪುರ ಮಾರ್ಗವಾಗಿ 53 ಕಿ.ಮೀ ದೂರವಾಗುತ್ತದೆ. ಎಲ್ಲೆಡೆಯಿಂದಲೂ ಸಾಕಷ್ಟು ಕರ್ನಾಟಕ ಹಾಗೂ ಆಂಧ್ರ ಸರ್ಕಾರದ ಸಾರಿಗೆ ಸಂಸ್ಥೆ ಬಸ್ ಗಳ ಸೌಲಭ್ಯವಿದೆ. ಉತ್ತರ ಕರ್ನಾಟಕ ಹಾಗೂ ಬೆಂಗಳೂರು ಮೈಸೂರು ಭಾಗದಿಂದ ಹಿಂದೂಪುರ – ಅನಂತಪರದವರೆಗೆ ರೈಲಿನ ವ್ಯವಸ್ಥೆಯೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT