ಹರಿಯಾಣದಲ್ಲಿ ಪಕ್ಷೇತರ ಶಾಸಕರ ಜೊತೆಗೂಡಿ ಸರ್ಕಾರ ರಚನೆ ಮಾಡುವುದಾಗಿ ಬಿಜೆಪಿಯ ಹಿರಿಯ ನಾಯಕರು ಸುಳಿವು ನೀಡಿದ್ದಾರೆ. ಬಿಜೆಪಿ 40 ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ. ಸರಳ ಬಹುಮತಕ್ಕೆ 6 ಸ್ಥಾನಗಳ ಕೊರತೆ ಇರುವುದರಿಂದ ಪಕ್ಷೇತರ ಶಾಸಕರ ಜೊತೆ ಸೇರಿ ಸರ್ಕಾರ ರಚಿಸುವುದಾಗಿ ಹೇಳಿದ್ದಾರೆ.
ಬಿಜೆಪಿ ಜೊತೆ ಈ ಹಿಂದೆ ಮಾಡಿಕೊಂಡ ಒಪ್ಪಂದಕ್ಕೆ ನಾವು ಬದ್ಧರಾಗಿದ್ದು ಮುಖ್ಯಮಂತ್ರಿ ಹುದ್ದೆ ಕುರಿತಂತೆ ಬಿಜೆಪಿ ನಾಯಕರ ಜೊತೆ ಚರ್ಚೆ ಮಾಡುತ್ತೇವೆ ಎಂದು ಶಿವಸೇನೆ ಮುಖ್ಯಸ್ಥ ಉದ್ದವ್ ಠಾಕ್ರೆ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ 55 ಸ್ಥಾನಗಳನ್ನು ಪಡೆದಿರುವ ಎನ್ಸಿಪಿ ಪಕ್ಷ ಇತರರು ಹಾಗೂ ಶಿವಸೇನೆ ನೆರವಿನಿಂದ ಸರ್ಕಾರ ರಚಿಸುವ ವದಂತಿಗಳನ್ನು ತಳ್ಳಿ ಹಾಕಿರುವ ಶರದ್ ಪವಾರ್ ಶಿವಸೇನೆ ಜೊತೆ ಮೈತ್ರಿಯ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
'ಅಧಿಕಾರ ವಹಿಸಲು ಅವಕಾಶ ಸಿಗುತ್ತದೆ, ಆದರೆ ನೆಲದ ಮೇಲೆ ಕಾಲೂರಿರುವುದು ಮುಖ್ಯ' ಎಂದು ಬಿಜೆಪಿ ವಿರುದ್ಧ ಶರದ್ ಪವಾರ್ ಆಕ್ರೋಶ ವ್ಯಕ್ತಪಡಿಸಿ್ದರು. ಜನರು ನಮ್ಮನ್ನು ವಿರೋಧ ಪಕ್ಷದಲ್ಲಿ ಕೂರಲು ಆದೇಶಿಸಿದ್ದಾರೆ; ನಾವು ಅದನ್ನು ನಿರ್ವಹಿಸುತ್ತೇವೆ ಎಂದರು.
'ಮಹಾರಾಷ್ಟ್ರದಲ್ಲಿ ಬಿಜೆಪಿಯ 220+ ಸ್ಥಾನಗಳನ್ನು ಗಳಿಸುವ ಯೋಜನೆಯನ್ನು ಜನರು ಒಪ್ಪಿಲ್ಲ. ದೀಪಾವಳಿಯ ಬಳಿಕ ವೈಯಕ್ತಿವಾಗಿ ರಾಜ್ಯದಲ್ಲಿ ಸಂಚಾರ ನಡೆಸಿ ಪಕ್ಷವನ್ನು ಬಲಗೊಳಿಸಲು ಪ್ರಯತ್ನಿಸುತ್ತೇನೆ.' – ಶರದ್ ಪವಾರ್
ಕೈಥಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಣದೀಪ್ ಸುರ್ಜೇವಾಲಾ ಸೋಲು ಕಂಡಿದ್ದಾರೆ.
ಸತಾರಾ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿಯ ಉದಯನ್ರಾಜೇ ಭೋಸಲೇ ವಿರುದ್ಧ ಎನ್ಸಿಪಿಯ ಶ್ರೀನಿವಾಸ್ ಪಾಟಿಲ್ ಗೆಲುವು ಸಾಧಿಸಿದ್ದಾರೆ.
'ನಮ್ಮನ್ನು ಬಿಟ್ಟು ಹೋದವರನ್ನು ಜನರು ಸ್ವೀಕರಿಸಿಲ್ಲ ಎಂಬುದು ಮುಖ್ಯವಾದ ಸಂಗತಿ. ಪಕ್ಷಾಂತರ ಬಿಟ್ಟು ಹೋದವರ ಪರವಾಗಿ ಕೆಲಸ ಮಾಡಿಲ್ಲ' - ಶರದ್ ಪವಾರ್, ಎನ್ಸಿಪಿ ಅಧ್ಯಕ್ಷ
ರಾಜ್ಯದ ಜನ ಬಿಜೆಪಿ ವಿರುದ್ಧ ಮತ ನೀಡಿದ್ದಾರೆ. ಹೀಗಾಗಿ ಕಾಂಗ್ರೆಸ್ ಸರ್ಕಾರ ರಚನೆ ಮಾಡಲಿದೆ. ಪಕ್ಷೇತರರು ಮತ್ತು ಜೆಜೆಪಿಯೊಂದಿಗೆ ನಾವು ಸಂಪರ್ಕದಲ್ಲಿದ್ದೇವೆ. ನಮ್ಮ ಬಳಿ ಸಾಕಷ್ಟು ಆಯ್ಕೆಗಳಿವೆ. ಎಲ್ಲರಿಗೂ ಸೂಕ್ತ ಸ್ಥಾನ ಮಾನ ನೀಡುತ್ತೇವೆ. ಅಧಿಕಾರ ಅವಕಾಶ ವಿಲ್ಲದ ಬಿಜೆಪಿ ಪಕ್ಷೇತರ ಶಾಸಕರಿಗೆ ಬೆದರಿಕೆ ಹಾಕುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಹೇಳಿದ್ದಾರೆ.
ಮುಂಬೈ: ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಲು ಆರಂಭಿಸಿದ ನಂತರ ಮಹಾರಾಷ್ಟ್ರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಆಡಳಿತಾರೂಢ ಬಿಜೆಪಿ–ಶಿವಸೇನೆ ಮೈತ್ರಿಕೂಟ ಅಂದುಕೊಂಡಷ್ಟು ಸ್ಥಾನಗಳಲ್ಲಿ ಜಯಗಳಿಸಿಲ್ಲ.
ಈವರೆಗೆ ಬಿಜೆಪಿ 101 ಕ್ಷೇತ್ರಗಳಲ್ಲಿ ಮುನ್ನಡೆ ಅಥವಾ ಗೆಲುವು ಸಾಧಿಸಿದೆ. ಶಿವಸೇನೆ 64, ಕಾಂಗ್ರೆಸ್ 40, ಎನ್ಸಿಪಿ 50 ಮತ್ತು ಇತರರು 16 ಸ್ಥಾನಗಳಲ್ಲಿ ಮುನ್ನಡೆ ಅಥವಾ ಗೆಲುವು ಸಾಧಿಸಿದ್ದಾರೆ.
ಶಿವಸೇನೆಯ ಹಿರಿಯ ನಾಯಕ ಮನೋಹರ್ ಜೋಶಿ ಮುಂದಿನ ಮಹಾರಾಷ್ಟ್ರ ಮುಖ್ಯಮಂತ್ರಿ ಶಿವಸೇನೆಯವರೇ ಆಗುತ್ತಾರೆ ಎಂದು ಹೇಳಿದ್ದಾರೆ. ಶಿವಸೇನೆಯ ವಕ್ತಾರ ಸಂಜಯ್ ರೌತ್, 50:50 ಸೂತ್ರದಂತೆ ಅಧಿಕಾರ ಹಂಚಿಕೆ ಮಾಡಿಕೊಳ್ಳಲಾಗುವುದು ಎಂದಿದ್ದಾರೆ.
ಶಿವಸೇನೆಯ ನಾಯಕ ಉದ್ಧವ್ ಠಾಕ್ರೆ ಈವರೆಗೆ ಮಾಧ್ಯಮಗಳೊಂದಿಗೆ ಮಾತನಾಡಿಲ್ಲ. ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಲಾಗಿದ್ದ ಉದ್ಧವ್ ಠಾಕ್ರೆ ಅವರ ಮಗ ಆದಿತ್ಯ ಠಾಕ್ರೆ ಮುಂಬೈನ ವರ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಎನ್ಸಿಪಿ ಮುಖ್ಯಸ್ಥ ಶರದ್ಪವಾರ್ ಮಧ್ಯಾಹ್ನ 1.30ಕ್ಕೆ ಮಾಧ್ಯಮಗೋಷ್ಠಿ ನಡೆಸುವ ನಿರೀಕ್ಷೆ ಇದೆ.
ಈ ನಡುವೆ ಕಾಂಗ್ರೆಸ್ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಸಚಿನ್ ಸಾವಂತ್, ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಕಾಂಗ್ರೆಸ್ ಎಲ್ಲ ಪ್ರಯತ್ನ ಮಾಡಲಿದೆ ಎಂದು ಹೇಳಿದ್ದಾರೆ.