ಸೋಮವಾರ, ಮಾರ್ಚ್ 27, 2023
22 °C
ಮಂಡೂರಿನಲ್ಲಿ ಅಂಚೆ ನೌಕರರ ಕೃತ್ಯ

ಕಸದ ತೊಟ್ಟಿಯಲ್ಲಿ ಆಧಾರ್‌ ಸಾಲಮನ್ನಾ ಪತ್ರ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಹದೇವಪುರ: ಮಂಡೂರು ಗ್ರಾಮದ ಕಸದ ತೊಟ್ಟಿಯಲ್ಲಿ ನೂರಾರು ರೈತರ ಸಾಲಮನ್ನಾ ಪತ್ರಗಳು, ಪ್ಯಾನ್‌ಕಾರ್ಡ್‌ ಮತ್ತು ಆಧಾರ್ ಕಾರ್ಡ್‌ಗಳು ಪೌರಕಾರ್ಮಿಕರಿಗೆ ಸಿಕ್ಕಿವೆ.

ಮಂಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಜ್ಯೋತಿಪುರ, ಮಾರಸಂದ್ರ, ಗುಂಡೂರು, ತಿರುಮೇನಹಳ್ಳಿ, ಕಟ್ಟುಗೊಲ್ಲಹಳ್ಳಿ, ಅಂಚರಹಳ್ಳಿ, ಕೊಡಿಗೆಹಳ್ಳಿ, ರಘುವನಹಳ್ಳಿ, ಬೊಮ್ಮೆನಹಳ್ಳಿ, ಲಗುಮೇನಹಳ್ಳಿ, ಹುಸ್ಕೂರು, ನಿಂಬೆಕಾಯಿಪುರ ಗ್ರಾಮದವರ ಈ ದಾಖಲೆಗಳು ಸಿಕ್ಕಿವೆ. 

‘ಅಂಚೆ ಕಚೇರಿಯ ನೌಕರರು ಸರಿಯಾಗಿ ವಿತರಿಸದೆ ಉದಾಸೀನದಿಂದ ಎಲ್ಲವನ್ನು ಕಸದ ತೊಟ್ಟಿಗೆ ಎಸೆದಿದ್ದಾರೆ’ ಎಂದು ಸ್ಥಳೀಯರಾದ ಬಸವರಾಜು ‘ಪ್ರಜಾವಾಣಿ'ಗೆ ತಿಳಿಸಿದರು.

‘ಮಂಡೂರು ಹಾಗೂ ಆವಲಹಳ್ಳಿ ಪೋಸ್ಟ್‌ಮನ್‌ಗಳ ನಡುವೆ ವೈಯಕ್ತಿಕ ದ್ವೇಷವಿರುವ ಹಿನ್ನೆಲೆಯಲ್ಲಿ ಸರಿಯಾಗಿ ಅವರಿಬ್ಬರೂ ಕಾರ್ಯನಿರ್ವಹಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕಸದ ತೊಟ್ಟಿಯಲ್ಲಿ ಕಾರ್ಡ್‌ ಗಳನ್ನು ಎಸೆದಿರುವ ಸಾಧ್ಯತೆ ಇದೆ. ಎರಡೂ ಅಂಚೆ ಕಚೇರಿಯ ಪೋಸ್ಟ್‌ಮನ್‌ಗಳ ವಿರುದ್ಧ ಕ್ರಮವನ್ನು ಕೈಗೊಳ್ಳಬೇಕು’ ಎಂದು ಸ್ಥಳೀಯರು ಆಗ್ರಹಿಸಿದರು.

ಅಂಚೆ ಇಲಾಖೆಯ ಅಧಿಕಾರಿಗಳನ್ನು ಸ್ಥಳೀಯರು ಸಂಪರ್ಕಿಸಿದಾಗ ಪ್ರತಿಕ್ರಿಯಿಸಿದ ಅವರು, ‘ಕಾರ್ಡ್‌ಗಳನ್ನು ಉದ್ದೇಶಪೂರ್ವಕವಾಗಿ ಕಸದ ತೊಟ್ಟಿಗೆ ಹಾಕಿಲ್ಲ. ಅಂಚೆ ಕಚೇರಿ ಸಹಾಯಕರ ಅಜಾಗರೂಕತೆಯಿಂದ ಈ ರೀತಿ ನಡೆದಿದೆ. ಕೂಡಲೇ ಸಮಸ್ಯೆಯನ್ನು ಬಗೆಹರಿಸಲಾಗುವುದು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.