ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಇದೇ 28ರಿಂದ ಮಾರ್ಚ್ 1ರವರೆಗೆ ಜೆ.ಸಿ. ರಸ್ತೆಯ ರವೀಂದ್ರ ಕಲಾಕ್ಷೇತ್ರದಲ್ಲಿ ಐದನೇ ಶರಣ ಸಾಹಿತ್ಯ ಸಮ್ಮೇಳನ ಆಯೋಜಿಸಿದೆ. ಡಾ. ಎಚ್.ಎಸ್. ಶಿವಪ್ರಕಾಶ್ ಅವರುಸಮ್ಮೇಳನಾಧ್ಯಕ್ಷರಾಗಿದ್ದಾರೆ.
ಇದೇ 28ರಂದು (ಗುರುವಾರ) ಸಂಜೆ 4.30 ಗಂಟೆಗೆ ಬಿಬಿಎಂಪಿ ಕಚೇರಿಯಿಂದ ರವೀಂದ್ರ ಕಲಾಕ್ಷೇತ್ರಕ್ಕೆ ವಚನ ವಾಹಿನಿ ಸ್ತಬ್ಧ ಚಿತ್ರದೊಂದಿಗೆ ಜಾನಪದ ಕಲಾ ತಂಡಗಳಿಂದ ಸಾಂಸ್ಕೃತಿ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ ಅವರು ಸಂಜೆ 4.30ಕ್ಕೆ ಮೆರವಣಿಗೆಯನ್ನು ಉದ್ಘಾಟಿಸುವರು.
ಸಂಜೆ 6 ಗಂಟೆಗೆ ಸಮ್ಮೇಳನವನ್ನು ಶಾಸಕ ರಾಮಲಿಂಗಾರೆಡ್ಡಿ ಅವರು ಉದ್ಘಾಟಿಸುವರು. ಗದಗದ ತೋಂಟದಾರ್ಯ ಮಠದ ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯವಹಿಸುವರು. ಪುಂಡಲೀಕ ಕಲ್ಲಿಗನೂರು ಮತ್ತು ಜಿ.ಕೆ.ಶಿವಣ್ಣ ಅವರು ರಚಿಸಿರುವ ವಚನ ರೇಖಾಚಿತ್ರ ಪ್ರದರ್ಶವನ್ನು ಶಾಸಕ ವಿ. ಸೋಮಣ್ಣ ಉದ್ಘಾಟಿಸುವರು.
ಇದೇ ವೇಳೆ ಬಸವರಾಜ ಸಬರದ ಅವರ ‘ಶರಣಧರ್ಮ– ದೇವರು ದೇವಾಲಯ’ ಕೃತಿಯನ್ನು ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಡಾ. ಬಿ.ಎಲ್.ಶಂಕರ್ ಬಿಡುಗಡೆ ಮಾಡುವರು. ಆರ್. ಶಿವಣ್ಣ ಅವರು ಸಂಪಾದಿಸಿರುವ ‘12ನೇ ಶತಮಾನದ ಬಸವಾದಿ ಶರಣರು’ ಕೃತಿಯನ್ನು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಸಲಹೆಗಾರ ಡಾ. ಗೊ.ರು.ಚನ್ನಬಸಪ್ಪ ಬಿಡುಗಡೆ ಮಾಡುವರು. ಶಾಸಕರಾದ ಬಸವರಾಜ ಹೊರಟ್ಟಿ, ಎಸ್.ಟಿ. ಸೋಮಶೇಖರ್ ಪಾಲ್ಗೊಳ್ಳುವರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಬಸವರಾಜ ಸಾದರ ಅಧ್ಯಕ್ಷತೆವಹಿಸುವರು.
ಮಾರ್ಚ್ 1ರಂದು (ಶುಕ್ರವಾರ) ಬೆಳಿಗ್ಗೆ 10 ಗಂಟೆಗೆ ಡಾ ಶಿವಕುಮಾರ ಸ್ವಾಮೀಜಿ ಅವರ ಸ್ಮರಣೆ, ಬೆಳಿಗ್ಗೆ 11 ಗಂಟೆಗೆ ‘ಶರಣ ಧರ್ಮದ ವಿಸ್ತೃತ ನೆಲೆಗಳು’ ಕುರಿತು ವಿಚಾರ ಸಂಕಿರಣ, ಮಧ್ಯಾಹ್ನ 12.30ಕ್ಕೆ ‘ಸೂತಕಗಳು– ಮಹಿಳೆ ಮತ್ತು ವಚನ ಧರ್ಮ’ ಕುರಿತು ವಿಚಾರ ಸಂಕಿರಣ ನಡೆಯಲಿದೆ.
ಸಂಜೆ 5 ಗಂಟೆಗೆ ಶರಣ ಸಾಧಕರಿಗೆ ಗೌರವ ಅರ್ಪಣೆ ನಡೆಯಲಿದೆ. ಬಳಿಕ ಸ್ನೇಹಾ ಕಪ್ಪಣ್ಣ ಅವರ ನಿರ್ದೇಶನದ, ಶ್ರೀನಿವಾಸ ಜಿ. ಕಪ್ಪಣ್ಣ ಅವರ ಪರಿಕಲ್ಪನೆಯ ‘ನೀನಲ್ಲದೆ ಮತ್ತಾರು ಇಲ್ಲವಯ್ಯಾ’ ನೃತ್ಯ ರೂಪಕವನ್ನು ಸಾಣೇಹಳ್ಳಿಯ ಶಿವಕುಮಾರ ಕಲಾಸಂಘದ 125ಕ್ಕೂ ಹೆಚ್ಚು ಕಲಾವಿದರು ಪ್ರಸ್ತುತಪಡಿಸುವರು.
ಕಾಲೇಜು ವಿದ್ಯಾರ್ಥಿಗಳ ವಚನತ್ಸವ, ರಸಪ್ರಶ್ನೆ, ವಚನ– ವ್ಯಾಖ್ಯಾನ ಕಾರ್ಯಕ್ರಗಳು ಸಮಾವೇಶದಲ್ಲಿ ಜರುಗಲಿವೆ ಎಂದು ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.