ಒಂ ದಿಷ್ಟು ಹೊಸ ಹುಡುಗರು ಒಟ್ಟಾಗಿದ್ದಾರೆ. ‘ಚಂದನವನ’ದಲ್ಲಿ ತಮ್ಮದೊಂದು ಹೆಜ್ಜೆ ಗುರುತು ಮೂಡಿಸಬೇಕು ಎಂಬ ಹಂಬಲದೊಂದಿಗೆ ಒಂದು ಸಿನಿಮಾ ಮಾಡಿದ್ದಾರೆ. ಈ ಸಿನಿಮಾಕ್ಕೆ ಅವರು ‘ಯಾರ್ ಯಾರೋ ಗೋರಿ ಮೇಲೆ’ ಎಂದು ಹೆಸರಿಟ್ಟಿದ್ದಾರೆ.
ಎ. ಪುಟ್ಟರಾಜು ಈ ಸಿನಿಮಾಕ್ಕೆ ಹಣ ಹೂಡಿದ್ದಾರೆ, ರಾಘು ಚಂದ್ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಸಿನಿಮಾದ ಎರಡು ಹಾಡುಗಳನ್ನು ತೋರಿಸಿ, ಸಿನಿಮಾ ಬಗ್ಗೆ ಮಾಹಿತಿ ನೀಡಲು ಈ ತಂಡ ಪತ್ರಿಕಾಗೋಷ್ಠಿ ಕರೆದಿತ್ತು. ‘ನಾನು ನಿರ್ದೇಶಿಸುತ್ತಿರುವ ಮೊದಲ ಸಿನಿಮಾ ಇದು. ಸಿನಿಮಾ ಕಥೆಯ ಬಗ್ಗೆ ಸ್ನೇಹಿತ ಪುಟ್ಟರಾಜು ಜೊತೆ ಚರ್ಚಿಸಿದೆ, ಅವರು ಬೆಂಬಲ ಕೊಟ್ಟರು. ಸಿನಿಮಾ ಚೆನ್ನಾಗಿ ಬಂದಿದೆ. ಹಾಡುಗಳು ಕೂಡ ಚೆನ್ನಾಗಿ ಬಂದಿವೆ’ ಎಂದರು ರಾಘು.
‘ಸಸ್ಪೆನ್ಸ್ ಮತ್ತು ಥ್ರಿಲ್ ಈ ಸಿನಿಮಾದಲ್ಲಿರುವ ಅಂಶಗಳು. ಇದರಲ್ಲಿ ಮೂವರು ಹೀರೊಗಳು ಇದ್ದಾರೆ. ಸಿನಿಮಾದ ಕಥೆ ಏನು ಎಂಬುದನ್ನು ಹೇಳಲಾರೆ. ಆದರೆ, ತಮಿಳು, ತೆಲುಗು ಭಾಷೆಗಳ ಸಿನಿಮಾಗಳಿಗೆ ಕಡಿಮೆ ಇಲ್ಲದಂತೆ ಇದನ್ನು ಮಾಡಿದ್ದೇನೆ. ಯಶಸ್ಸು ಸಿಗುತ್ತದೆ ಎಂದು ನಂಬಿದ್ದೇನೆ’ ಎಂದರು ರಾಘು. ಇದರ ಬಹುಪಾಲು ಚಿತ್ರೀಕರಣ ಬಳ್ಳಾರಿಯಲ್ಲಿ ನಡೆದಿದ್ದು, ಬೆಂಗಳೂರು, ಸಕಲೇಶಪುರ ಮತ್ತು ಶ್ರೀರಂಗಪಟ್ಟಣದಲ್ಲಿ ಕೂಡ ಕ್ಯಾಮೆರಾ ಕಣ್ಣು ಕೆಲವು ದೃಶ್ಯಗಳನ್ನು ಸೆರೆಹಿಡಿದಿದೆ ಎಂದು ತಂಡ ಹೇಳಿದೆ.
ನಿರ್ಮಾಪಕ ಪುಟ್ಟರಾಜು ಅವರು ಬಳ್ಳಾರಿಯವರು, ಅಲ್ಲಿ ಅವರು ವ್ಯಾಪಾರದಲ್ಲಿ ತೊಡಗಿಸಿಕೊಂಡವರು. ‘ಈ ಸಿನಿಮಾದಲ್ಲಿ ನಾನು ಕೂಡ ಒಬ್ಬ ನಾಯಕ ನಟ’ ಎಂದರು ಪುಟ್ಟರಾಜು. ಸಿನಿಮಾ ಮಾಡಬೇಕು ಎಂಬುದು ಅವರಿಗೆ ಏಳು ವರ್ಷಗಳ ಬಯಕೆಯಂತೆ. ಲೋಕಿ ಸಂಗೀತ, ಪ್ರದೀಪ್ ಗಾಂಧಿ ಅವರ ಛಾಯಾಗ್ರಹಣ ಈ ಚಿತ್ರಕ್ಕೆ ಇದೆ.
ನಟ ಅಭಿ ಅವರು ಇದರಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಬಳ್ಳಾರಿಯಲ್ಲಿ ಒಂದು ಫೈಟ್ ಚಿತ್ರೀಕರಣ ನಡೆದಿದೆ. ನನ್ನದು ದ್ವಿಪಾತ್ರ ಆಗಿರುವ ಕಾರಣ ನನ್ನ ಹಾವಭಾವಗಳನ್ನು ಆಗಾಗ ಬದಲಿಸುತ್ತ ಇರಬೇಕಿತ್ತು’ ಎಂದರು ಅಭಿ. ಈ ಸಿನಿಮಾದಲ್ಲಿ ತ್ರಿಕೋನ ಪ್ರೇಮಕಥೆಯೊಂದು ಇದೆ ಎನ್ನುವ ಗುಟ್ಟು ಬಿಟ್ಟುಕೊಟ್ಟರು ಅಭಿ. ಶಿವಮೊಗ್ಗದ ವರ್ಷಾ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ‘ನನಗೆ ಸಿಕ್ಕಿರುವ ಪಾತ್ರ ಇಷ್ಟವಾಯಿತು’ ಎಂದರು ವರ್ಷಾ.
ರಾಘು ಚಂದ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.